ಬೆಂಗಳೂರು: ಎಂದಿನಂತೆ ಈ ಬಾರಿಯೂ ಕರ್ನಾಟಕಕ್ಕೆ ಕೇಂದ್ರ ಬಜೆಟ್ ನಲ್ಲಿ ಅನ್ಯಾಯವಾಗಿದೆ. ರಾಜ್ಯದಲ್ಲಿ ಏಮ್ಸ್ ಸ್ಥಾಪನೆ ಮತ್ತು ಬೆಂಗಳೂರಿಗೆ ವಿಶೇಷ ಪ್ಯಾಕೇಜ್ ಘೋಷಿಸಬಹುದೆಂಬ ನಿರೀಕ್ಷೆ ಕೂಡ ಹುಸಿಯಾಗಿದೆ, ಇದು ಸಹಜವಾಗಿಯೆ ಎಲ್ಲರಲ್ಲೂ ಬೇಸರ ಮೂಡಿಸಿದೆ.
ಆದರೆ ಡಿಜಿಟಲ್ ಆರ್ಥಿಕ ವ್ಯವಸ್ಥೆ ಮತ್ತು ಕೌಶಲ್ಯಾಭಿವೃದ್ಧಿಗಳು ಐಟಿ ರಾಜಧಾನಿಯ ಕೈಗಾರಿಕೆಗಳ ಮೇಲೆ ಉತ್ತಮ ಪರಿಣಾಮ ಬೀರಲಿವೆ.
ಬಜೆಟ್ ನಲ್ಲಿ ಹೊಸತೇನಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ ಕೇಂದ್ರ ಬಜೆಟ್ನಲ್ಲಿ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಪೂರಕವಾಗುವ ಯಾವುದೇ ಅಂಶಗಳು ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಸೆ ವ್ಯಕ್ತಪಡಿಸಿದರು.
ಇದೊಂದು ವೇತನ ಬಡ್ತಿ (ಇಂಕ್ರಿಮೆಂಟಲ್) ರೀತಿಯ ಬಜೆಟ್. ಅಲ್ಲಿ ಇಲ್ಲಿ ತುಸು ಅನುದಾನ ಹೆಚ್ಚಳ ಮಾಡಲಾಗಿದೆ. ಯೋಜನೆಗಳಲ್ಲಿ ಯಾವುದೇ ಮಹತ್ವದ ಬದಲಾವಣೆ ಆಗಿಲ್ಲ. ನಿರೀಕ್ಷೆ ಹುಸಿಯಾಗಿದೆ .ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯ ನಂತರ ಭಾರಿ ನಿರೀಕ್ಷೆ ಇತ್ತು. ಆದರೆ, ಇದರಿಂದ ತೊಂದರೆಗೆ ಒಳಗಾಗಿದ್ದ ರೈತರು, ಕೃಷಿ ಕಾರ್ಮಿಕರು, ಸಣ್ಣ ಉದ್ಯಮಿಗಳು, ಕಟ್ಟಡ ನಿರ್ಮಾಣಕಾರರು, ಮಹಿಳೆಯರು, ದುರ್ಬಲ ವರ್ಗದವರ ಆತ್ಮಸ್ಥೈರ್ಯ ಹೆಚ್ಚಿಸುವ ಯಾವುದೇ ಕಾರ್ಯಕ್ರಮ ನೀಡಿಲ್ಲ’ ಎಂದರು.
ರಾಜ್ಯದಲ್ಲಿ ಏಮ್ಸ್ ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಏಮ್ಸ್ ಸ್ಥಾಪನೆಯ ರೂಪುರೇಷೆ ಹಾಗೂ ಅದರ ಪ್ರಯೋಜನಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಿವರವಾದ ಪ್ರಸ್ತಾವನೆ ಸಲ್ಲಿಸಿದ್ದೆವು, ಆದರೆ ಸರ್ಕಾರ ಇದನ್ನು ಪರಿಗಣಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಪ್ರಪಂಚದಲ್ಲೇ ಡೈನಾಮಿಕ್ ಸಿಟಿ ಎಂದು ಪ್ರಸಿದ್ಧಿಯಾಗಿರುವ ಬೆಂಗಳೂರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬಹುದೆಂಬ ಭರವಸೆ ಹೊಂದಿದ್ದೆವು, ಆದರೆ ಕೇಂದ್ರ ಬಜೆಟ್ ನಲ್ಲಿ ಯಾವುದೇ ವಿಶೇಷ ಸವಲತ್ತು ಒದಗಿಸಿಲ್ಲ, ಹೀಗಾಗಿ ನಿರಾಸೆಯಾಗಿದೆ ಎಂದು ಎಫ್ ಕೆಸಿಸಿಐ ಅಧ್ಯಕ್ಷ ಎಂ.ಸಿ ದಿನೇಶ್ ತಿಳಿಸಿದ್ದಾರೆ. ಆದರೆ ಬಜೆಟ್ ಅಭಿವೃದ್ಧಿ ಹಾಗೂ ಬೆಳವಣಿಗೆ ಪೂರಕವಾಗಿದೆ ಎಂದು ಹೇಳಿದ್ದಾರೆ.
Advertisement