ಕೋಲ್ಕತಾ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಮಂಡಿಸಿದ 2017-18ನೇ ಸಾಲಿನ ಬಜೆಟ್ ಅನ್ನು ಅರ್ಥವಿಲ್ಲದ ಬಜೆಟ್ ಎಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಈ ಬಜೆಟ್ ಗೆ ಯಾವುದೇ ಗೊತ್ತು ಗುರಿ ಇಲ್ಲ ಮತ್ತು ಇದೊಂದು ಟೊಳ್ಳು ಮಾತು ಅಷ್ಟೆ ಎಂದಿದ್ದಾರೆ.
2017ರ ವಿವಾದಾತ್ಮಕ ಬಜೆಟ್ ಅರ್ಥವಿಲ್ಲದ, ಉಪಯೋಗಕ್ಕೆ ಬಾರದ, ಆಧಾರ ರಹಿತ, ಉದ್ದೇಶವಿಲ್ಲದ, ಕ್ರಮವಿಲ್ಲದ ಮತ್ತು ಗೊತ್ತು ಗುರಿ ಇಲ್ಲದ ಬಜೆಟ್ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
ತೆರಿಗೆ ಕಟ್ಟುವವರ ಹಣಕ್ಕೆ ಈಗಲೂ ವಿತ್ ಡ್ರಾ ಮಿತಿ ಇದೆ. ಮೊದಲು ಈ ನಿರ್ಬಂದಗಳನ್ನು ತೆಗೆದು ಹಾಕಿ ಮತ್ತು ನೋಟ್ ನಿಷೇಧದ ಅಂಕಿ ಸಂಖ್ಯೆ ಎಲ್ಲಿ ಎಂದು ದೀದಿ ಪ್ರಶ್ನಿಸಿದ್ದಾರೆ.
ನೋಟ್ ನಿಷೇಧದ ವಿರುದ್ಧದ ಪ್ರತಿಭಟನೆಯ ಭಾಗವಾಗಿಯೇ ತೃಣಮೂಲ ಕಾಂಗ್ರೆಸ್ ನಿನ್ನೆಯಿಂದ ಆರಂಭವಾಗಿರುವ ಎರಡು ದಿನಗಳ ಸಂಸತ್ ಅಧಿವೇಶನಕ್ಕೆ ಗೈರು ಆಗಿದೆ.