
ನವದೆಹಲಿ: ಮಾಜಿ ಸಚಿವ ಹಾಗೂ ಕೇರಳ ಸಂಸದ ಇ ಅಹಮದ್ ಅವರ ಸಾವಿನ ಹೊರತಾಗಿಯೂ ಬಜೆಟ್ ಮಂಡನೆ ನಿಗದಿಯಂತೆ ನಡೆಯಲಿದೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.
ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಇ ಅಹಮದ್ ಅವರು ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಬಜೆಟ್ ಅಧಿವೇಶನ ಮುಂದೂಡಿಕೆಯಾಗುವ ಕುರಿತು ಸುದ್ದಿಗಳು ಹರಿದಾಡುತ್ತಿದ್ದು, ಈ ಬಗ್ಗೆ ಸ್ವತಃ ಪ್ರಧಾನಿ ಕಚೇರಿ ಸ್ಪಷ್ಟನೆ ನೀಡಿದೆ. ಅದರಂತೆ ನಿಗದಿಯಂತೆಯೇ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು 11 ಗಂಟೆಗೆ ಬಜೆಟ್-2017 ಅನ್ನು ಮಂಡಿಸಲಿದ್ದಾರೆ ಎಂದು ಹೇಳಿದೆ. ಅಂತೆಯೇ ಈ ಬಗ್ಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸಂಸತ್ ನ ಅಧಿಕಾರಿಗಳು ಹಾಗೂ ಸರ್ವಪಕ್ಷಗಳ ಸಭೆ ಕರೆದು ಬಳಿಕ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದೂ ಪ್ರಧಾನಿ ಕಚೇರಿ ಹೇಳಿದೆ.
ಒಂದು ವೇಳೆ ಸಭೆಯಲ್ಲಿ ಕಲಾಪವನ್ನು ಮುಂದೂಡುವ ನಿರ್ಧಾರ ಕೈಗೊಂಡರೆ ಬಜೆಟ್ ಮಂಡನೆ ನಾಳೆಗೆ ಮುಂದೂಡಿಕೆಯಾಗಲಿದೆ.
ಇಂದು ನಡೆಯುವ ಲೋಕಸಭೆ ಕಲಾಪದಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ನೇತೃತ್ವದಲ್ಲಿ ಮೃತಪಟ್ಟ ಸಂಸದರಿಗೆ ಸಂತಾಪ ಸೂಚಿಸಲಾಗುತ್ತದೆ. ಬಳಿಕ ಬಜೆಟ್ ಅಧಿವೇಶನ ಮುಂದೂವ ಕುರಿತು ಸ್ಪೀಕರ್ ಅಧಿಕೃತ ಘೋಷಣೆ ಹೊರಡಿಸಲಿದ್ದಾರೆ.
ನೋಟು ನಿಷೇಧ ಬಳಿಕದ ಆರ್ಥಿಕ ಬೆಳವಣಿಗೆ ಹಾಗೂ ಕೇಂದ್ರ ಸರ್ಕಾರದ ನಗದು ರಹಿತ ವಹಿವಾಟು ಗುರಿ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ತೀವ್ರ ಕುತೂಹಲ ಕೆರಳಿಸಿದ್ದು, ಯಾವೆಲ್ಲಾ ವಲಯಗಳಿಗೆ ಬಜೆಟ್ ಎಷ್ಟರ ಮಟ್ಟಿಗೆ ಉತ್ತೇಜನ ನೀಡಲಿದೆ ಎಂಬುದು ತಿಳಿಯಲಿದೆ. ಅಂತೆಯೇ ರೈಲ್ವೇ ಬಜೆಟ್ ಅನ್ನೂ ಕೂಡ ಕೇಂದ್ರ ಬಜೆಟ್ ನಲ್ಲೇ ವಿಲೀನ ಮಾಡಿರುವುದರಿಂದ ರೈಲ್ವೇ ಬಜೆಟ್ ಕೂಡ ಇಂದೇ ಮಂಡನೆಯಾಗಲಿದೆ.
Advertisement