ಕೃಷಿಗೆ 1.60, ಗ್ರಾಮೀಣಾಭಿವೃದ್ಧಿಗೆ 1.23 ಲಕ್ಷ ಕೋಟಿ ರೂ ನಿಗದಿ: 2 ವರ್ಷಗಳಲ್ಲಿ ರೈತರ ಆದಾಯ ದ್ವಿಗುಣ

ಬರುವ 2020ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಬದ್ಧವಾಗಿದ್ದು, ಇದಕ್ಕಾಗಿ ತಂತ್ರಜ್ಞಾನ ಮೇಲ್ದರ್ಜೆಗೇರಿಸುವ, ಧಾನ್ಯ ಲಕ್ಷ್ಮಿ ಯೋಜನೆ ಜಾರಿ, ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಬಲಪಡಿಸುವ, ಕೃಷಿ ಉಡಾನ್, ರೈಲ್ವೆ ಉಡಾನ್ ನಂತಹ ಹೊಸ ಯೋಜನೆಗಳನ್ನು ಜಾರಿಗೆ ತರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗಿಂದು ಪ್ರಕಟಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬರುವ 2020ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಬದ್ಧವಾಗಿದ್ದು, ಇದಕ್ಕಾಗಿ ತಂತ್ರಜ್ಞಾನ ಮೇಲ್ದರ್ಜೆಗೇರಿಸುವ, ಧಾನ್ಯ ಲಕ್ಷ್ಮಿ ಯೋಜನೆ ಜಾರಿ, ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಬಲಪಡಿಸುವ, ಕೃಷಿ ಉಡಾನ್, ರೈಲ್ವೆ ಉಡಾನ್ ನಂತಹ ಹೊಸ ಯೋಜನೆಗಳನ್ನು ಜಾರಿಗೆ ತರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗಿಂದು ಪ್ರಕಟಿಸಿದ್ದಾರೆ.

2020 - 21ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕೃಷಿಗೆ ಒತ್ತು ನೀಡಿರುವ ಅವರು, ಕೃಷಿಯಲ್ಲಿ 15 ಅಂಶಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿರುವ ಅವರು, ಕೃಷಿ, ಕೃಷಿ ಅವಲಂಬಿತ ಕ್ಷೇತ್ರದ ಅಭ್ಯುದಯಕ್ಕಾಗಿ 1.60 ಲಕ್ಷ ಕೋಟಿ, ಗ್ರಾಮೀಣಾಭಿವೃದ್ಧಿಗೆ 1.23 ಲಕ್ಷ ಕೋಟಿ ರೂ ನಿಗದಿ ಮಾಡಲಾಗಿದೆ. 2020 - 21ನೇ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ ನಬಾರ್ಡ್ ಮೂಲಕ 15 ಲಕ್ಷ ಕೋಟಿ ರೂ ಸಾಲ ಸೌಲಭ್ಯ ಒದಗಿಸಲಾಗುವುದು. ಜತೆಗೆ ಜನರ ಖರೀದಿ ಸಾಮರ್ಥ್ಯ ವೃದ್ಧಿಸಲಾಗುವುದು ಎಂದರು. 

ನೀರಾವರಿ ಯೋಜನೆಯನ್ನು100 ಜಿಲ್ಲೆಗಳಿಗೆ ವಿಸ್ತರಣೆ ಮಾಡುವ ಜತೆಗೆ ರೈತರು ತಮ್ಮ ಭೂಮಿಯಲ್ಲಿ  ಸೌರ ವಿದ್ಯುತ್ ಉತ್ಪಾದನೆ ಮಾಡಲು ಪ್ರೋತ್ಸಾಹಿಸಲಾಗುವುದು. ಅನ್ನದಾನ ವಿದ್ಯುತ್ ದಾತನೂ ಸಹ ಆಗುವಂತೆ ಮಾಡುತ್ತೇವೆ. ಬರಡು ಭೂಮಿ ಹೊಂದಿರುವ 20 ಲಕ್ಷ ರೈತರಿಗೆ ಸೌರ ವಿದ್ಯುತ್ ಪಂಪ್ ವಿತರಣೆಗೆ ಕ್ರಮ, ಜತೆಗೆ 15 ಲಕ್ಷ ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಜಾಲದ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದರು. 


ಸಮತೋಲಿತ ಗೊಬ್ಬರ, ರೈತರ ಉತ್ಪನ್ನಗಳನ್ನು ಸಂಗ್ರಹಿಸಲು ಉಗ್ರಾಣ ನಿರ್ಮಾಣಕ್ಕೆ ಒತ್ತು ನೀಡಿ ಆಹಾರಧಾನ್ಯ ಸಂಗ್ರಹ ಪ್ರಮಾಣವನ್ನು 162 ದಶಲಕ್ಷ ಟನ್ ಗಳಿಗೆ ಸಾಮರ್ಥ್ಯ ಹೆಚ್ಚಿಸಲಾಗುವುದು. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 6.1 ಲಕ್ಷ ರೈತರು ನೋಂದಣಿಯಾಗಿದ್ದು, ಇದರಿಂದ ವಿಮಾ ಯೋಜನೆಗೆ ಹೊಸ ಸ್ವರೂಪ ದೊರೆತಿದೆ ಎಂದರು. 

ರೈತ ಮಹಿಳೆಯರಿಗಾಗಿ ಧನ ಲಕ್ಷ್ಮಿ ಯೋಜನೆ ಜಾರಿಗೆ ತರಲಾಗುವುದು.  ಧಾನ್ಯ ಲಕ್ಷ್ಮಿ ಯೋಜನೆಯಡಿ ಮುದ್ರಾ ಮತ್ತು ನಬಾರ್ಡ್ ಮೂಲಕ ರೈತ ಮಹಿಳೆಯರಿಗೆ ಕೃಷಿ ಸಾಲಸಾಲಭ್ಯ ಒದಗಿಸಲಾಗುವುದು. ಕೃಷಿ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಗೆ ಒತ್ತು ನೀಡಲಾಗುವುದು ಎಂದರು. ಕೃಷಿ ಉಡಾನ್, ರೈಲ್ವೆ ಉಡಾನ್ ಯೋಜನೆ ಜಾರಿಗೆ ತರಲಾಗುವುದು. ನಾಗರಿಕ ವಿಮಾನ ಯಾನ ವಲಯದಲ್ಲಿ ಉಡಾನ್ ಯೋಜನೆ ಯಶಸ್ವಿಯಾಗಿದ್ದು, ಇದೇ ಮಾದರಿಯಲ್ಲಿ ರೈಲು ಮತ್ತು ವಿಮಾನಗಳ ಮೂಲಕ ರೈತರ ಉತ್ಪನ್ನಗಳನ್ನು ಸಾಗಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಕೃಷಿ ಜತೆಗೆ ಕೃಷಿ ಅವಲಂಬಿತ ಕ್ಷೇತ್ರಗಳತ್ತಲೂ ಗಮನಹರಿಸಲಾಗಿದ್ದು. ಬರುವ 2025ರ ವೇಳೆಗೆ ಹಾಲು ಉತ್ಪಾದನೆಯನ್ನು ದ್ವಿಗುಣಗೊಳಿಸಲಾಗುವುದು. ಸಾಗರ ಮಿತ್ರ ಯೋಜನೆಯಡಿ ಕರಾವಳಿ ಭಾಗಗಳಲ್ಲಿ ಯುವ ಸಮೂಹಕ್ಕೆ ಮೀನುಗಾರಿಕೆ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ನೆರವು ನೀಡಲಾಗುವುದು. 500 ಮೀನುಗಾರ ಉತ್ಪಾದನಾ ಸಂಘಟನೆಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದರು. ತೋಟಗಾರಿಕೆ ವಲಯದಲ್ಲಿ 311 ದಶಲಕ್ಷ ಟನ್ ತೋಟಗಾರಿಕಾ ಉತ್ಪನ್ನಗಳು ಉತ್ಪಾದನೆಯಾಗುತ್ತಿದ್ದು, ಈ ಕ್ಷೇತ್ರದಲ್ಲಿ ಉತ್ಪಾದನೆ ಪ್ರೋತ್ಸಾಹಿಸಲು ಶೂನ್ಯ ಬಂಡವಾಳ ಕೃಷಿಗೆ ಒತ್ತು ನೀಡಲಾಗುವುದು. ರಾಷ್ಟ್ರೀಯ ಕೃಷಿ ಮಾರುಕಟ್ಟೆ ಯೋಜನೆ ಜಾರಿ. ನಬಾರ್ಡ್ ಮರು ಸಾಲ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರಗಳ ಜತೆಗೂಡಿ ಪರಿಣಾಮಕಾರಿಯಾಗಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸಲಿದ್ದು, ರಾಜ್ಯ ಸರ್ಕಾರಗಳು ಸಹ ಕೃಷಿಗೆ ಸಂಬಂಧಿಸಿದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ನಿರ್ಮಲಾ ಸೀತಾರಾಮನ್ ಮನವಿಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com