ಬೆಂಗಳೂರು: ರಾಜ್ಯದಲ್ಲಿ ಬೀದಿ ನಾಯಿಗಳನ್ನು ದತ್ತು ಪಡೆಯಲು ಅನುಕೂಲವಾಗುವಂತೆ ಆನ್ಲೈನ್ ಪೋರ್ಟಲ್ ಅನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಘೋಷಿಸಿದ್ದಾರೆ.
'ಬೀದಿ ನಾಯಿಗಳ ಶುಶ್ರೂಷೆ ಮತ್ತು ಆರೈಕೆಗಾಗಿ, ಸಾರ್ವಜನಿಕರಿಗೆ ಸಹಾಯ ಮಾಡಲು ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಈ ಆನ್ಲೈನ್ ಪೋರ್ಟಲ್ ಮೂಲಕ, ಪ್ರಾಣಿ ಪ್ರೇಮಿಗಳು ನಾಯಿಗಳನ್ನು ದತ್ತು ಪಡೆಯಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು' ಎಂದು ಅವರು ವಿಧಾನಸಭೆಯಲ್ಲಿ ಬಜೆಟ್ ಭಾಷಣದ ಭಾಗವಾಗಿ ಹೇಳಿದರು.
ರಾಷ್ಟ್ರೀಯ ಪ್ರಾಣಿ ಅನುವಂಶಿಕ ಸಂಪನ್ಮೂಲಗಳ ಬ್ಯೂರೋ (ಐಸಿಎಆರ್) ಮಾನ್ಯತೆ ಪಡೆದಿರುವ ಮುಧೋಳ ಹೌಂಡ್ ಕೆನೈನ್ ತಳಿಯ ಅಭಿವೃದ್ಧಿಗೆ ಮುಖ್ಯಮಂತ್ರಿ ಬೊಮ್ಮಾಯಿ 5 ಕೋಟಿ ರೂ. ಅನುದಾನವನ್ನು ಘೋಷಿಸಿದರು. ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಈ ತಳಿಯು ಭಾರತೀಯ ಸೇನೆಗೆ ಸೇರ್ಪಡೆಗೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯಲು ಪ್ರಾಣಿ ಕಲ್ಯಾಣ ಮಂಡಳಿಗೆ 5 ಕೋಟಿ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ಬೆಂಗಳೂರಿನಲ್ಲಿ ಗಾಯಗೊಂಡ ಮತ್ತು ಬೀದಿ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಮೊಬೈಲ್ ಕ್ಲಿನಿಕ್ಗಳನ್ನು ಸ್ಥಾಪಿಸುವುದಾಗಿ ಅವರು ಘೋಷಿಸಿದರು.
ಸ್ವತಃ ಪ್ರಾಣಿಪ್ರೇಮಿಯಾಗಿರುವ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ತಮ್ಮ ನೆಚ್ಚಿನ ನಾಯಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವಾಗ ಕಣ್ಣೀರಿಟ್ಟಿದ್ದರು.
'777 ಚಾರ್ಲಿ' ಸಿನಿಮಾ ನೋಡಿ ಭಾವುಕರಾದ ಅವರು, ತಮ್ಮ ನೆಚ್ಚಿನ ನಾಯಿಯನ್ನು ನೆನೆದು ಮಾಧ್ಯಮದವರೊಂದಿಗೆ ಅಳಲು ತೋಡಿಕೊಂಡಿದ್ದರು.
Advertisement