ಆನ್ಲೈನ್ ಮೂಲಕ ಹಣ ವರ್ಗಾವಣೆಗೆ ದೂರವಾಣಿ ಪರಿಶೀಲನೆ ಕಡ್ಡಾಯ
ಬೆಂಗಳೂರು: ಟೆಕ್ನಾಲಜಿ ಬೆಳೆಯುತ್ತಿದ್ದಂತೆ ನಾಗರಿಕರು ಅದಕ್ಕೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಇತ್ತೀಚೆಗಂತೂ, ನಾಗರಿಕರು ತಮ್ಮ ಕೆಲಸಗಳನ್ನು ಸುಲಭ ರೀತಿಯಲ್ಲಿ ಮುಗಿಸಬಹುದು ಎನ್ನುವ ಉದ್ದೇಶದಿಂದ ಆನ್ಲೈನ್ಗೆ ಮೊರೆ ಹೋಗುತ್ತಿದ್ದಾರೆ. ಬ್ಯಾಂಕ್ಗಳಿಗೆ ಖುದ್ದಾಗಿ ತೆರಳುವ ಬದಲು, ಆನ್ಲೈನ್ನಲ್ಲೇ ಹಣ ವರ್ಗಾವಣೆ ಮಾರ್ಗ ಬಹಳ ಸುಲಭವಾಗಿಬಿಟ್ಟಿದೆ.
ಆದರೆ, ಇನ್ನು ಮುಂದೆ ಆನ್ಲೈನ್ನಲ್ಲಿ ಹಣ ವರ್ಗಾವಣೆ ಮಾಡಬೇಕಾದರೆ ಸ್ವಲ್ಪ ಎಚ್ಚೆತ್ತುಕೊಳ್ಳಬೇಕಿದೆ. ಏಕೆಂದರೆ, ಆನ್ಲೈನ್ನಲ್ಲಿ ಹಣ ವರ್ಗಾವಣೆ ಮಾಡಬೇಕಾದರೆ, ಆನ್ಲೈನ್ ವಂಚಕರು ಆ ಹಣವನ್ನು ತಮ್ಮ ಖಾತೆಗೆ ಲಪಟಾಯಿಸಿಕೊಳ್ಳುವ ಪ್ರಕರಣ ಹೆಚ್ಚಾಗುತ್ತಿದೆ.
ಇದಕ್ಕೆ ಕಡಿವಾಣ ಹಾಕಲೆಂದೆ, ಅಪರಾಧ ತನಿಖಾ ದಳ(ಸಿಐಡಿ) ಆನ್ಲೈನ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ಮಾಡಬೇಕಾದರೆ ದೂರವಾಣಿ ಪರಿಶೀಲನೆ ಕಡ್ಡಾಯವಾಗಿ ಮಾಡಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಇನ್ನು ಮುಂದೆ ಗ್ರಾಹಕನ ಖಾತೆಯಿಂದ ಹಣ ವರ್ಗಾವಣೆ ಮಾಡಬೇಕಾದರೆ ಬ್ಯಾಂಕ್ಗಳು ದೂರವಾಣಿ ಕರೆ ಮೂಲಕ ಗ್ರಾಹಕನಿಂದ ಮಾಹಿತಿಯನ್ನು ಪಡೆದ ನಂತರ ಹಣ ವರ್ಗಾವಣೆ ಮಾಡಬೇಕು. ಈ ಸಂಬಂಧ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಇಮೇಲ್ ಮಾಡಲಾಗಿದೆ ಎಂದು ಅಪರಾಧ ತನಿಖಾ ದಳ ಹೇಳಿದೆ.
ಇತ್ತೀಚೆಗಷ್ಟೇ ಕೆನಡಾದಲ್ಲಿ ವಾಸಗಿರುವ ವ್ಯಕ್ತಿಯೊಬ್ಬರು ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡಬೇಕಾದರೆ, ತಮ್ಮ ಖಾತೆಯಲ್ಲಿದ್ದ 1 ಕೋಟಿ ಹಣವನ್ನು ಲೂಟಿ ಮಾಡಲಾಗಿದೆ ಎಂದು ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆದರೆ, ಯಾವ ರೀತಿ ಹಣ ಪೋಲಾಗಿದೆ ಎಂಬುದರ ಬಗ್ಗೆ ಸರಿಯಾಗಿ ಮಾಹಿತಿ ಸಿಗುತ್ತಿಲ್ಲ. ದುಬೈನಲ್ಲಿರುವ ನಾಲ್ವರು ಆನ್ಲೈನ್ ವಂಚಕರು ಈತನ ಖಾತೆಯಿಂದ ಹಣ ಲಪಟಾಯಿಸಿಕೊಂಡಿರುವ ಮಾಹಿತಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಆನ್ಲೈನ್ ಹಣ ವರ್ಗಾವಣೆ ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ ಸೈಬರ್ ಅಪರಾಧ ದಳ ಈ ಕ್ರಮಕ್ಕೆ ಮುಂದಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ