ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯೆಂದೇ ಹೇಳಲಾಗುತ್ತಿರುವ ಚಿನ್ನ ನಗದೀಕರಣ ಯೋಜನೆಯತ್ತ ಇದೀಗ ಆಂಧ್ರಪ್ರದೇಶ ಶ್ರೀಮಂತ ದೇಗುಲ ತಿರುಪತಿ ಮುಖ ಮಾಡಿದ್ದು, ದೇಗುಲದ ಆಡಳಿತ ಮಂಡಳಿ ಇದೀಗ ಚಿನ್ನ ನಗದೀಕರಣ ಯೋಜನೆ (ಜಿಎಂಎಸ್)ಗೆ ಅತೀ ಹೆಚ್ಚು ಚಿನ್ನ ಠೇವಣಿ ಇಡಲಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಜಾರಿಯಾಗಿರುವ ಚಿನ್ನ ನಗದೀಕರಣ ಯೋಜನೆಗೆ ಕೇವಲ 1 ಕೆ.ಜಿಯಷ್ಟು ಚಿನ್ನ ಸಲ್ಲಿಕೆಯಾಗಿದ್ದು, ಇದೀಗ ತಿರುಪತಿ ದೇಗುಲ ಯೋಜನೆಯತ್ತ ಆಸಕ್ತಿ ತೋರಿದೆ. ಇದರಂತೆ ದೇಗುಲಕ್ಕೆ ಸೇರಿದ ಸುಮಾರು 5.5 ಟನ್ ರಷ್ಟು ಚಿನ್ನವನ್ನು ಯೋಜನೆಗೆ ವಿನಿಯೋಗಿಸಲಿದ್ದು, ಈ ಬಗ್ಗೆ ಇನ್ನು 10 ರಿಂದ 15 ದಿನಗಳ ಒಳಗಾಗಿ ಆಡಳಿತ ಮಂಡಳಿ ಅಂತಿಮ ತೀರ್ಮಾನಕ್ಕೆ ಬರಲಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಜಾರಿಯಾಗಿರುವ ಯೋಜನೆಯಲ್ಲಿ ಟಿಟಿಡಿಯು ಈಗಾಗಲೇ ಕೆಲವು ಬ್ಯಾಂಕ್ ಗಳಲ್ಲಿ ಚಿನ್ನ ಠೇವಣಿ ಇರಿಸಿದೆ. ಇದೀಗ ಪ್ರಧಾನಿಯವರ ಚಿನ್ನ ನಗದೀಕರಣ ಯೋಜನೆಯತ್ತ ಕೂಡ ತನ್ನ ಆಸಕ್ತಿ ತೋರಿದ್ದು, ಯಾವ ಯೋಜನೆ ಹೆಚ್ಚು ಲಾಭ ತರಲಿದೆ ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಿದೆ.
ಶ್ರೀಮಂತ ದೇಗುಲ ಎಂದೇ ಖ್ಯಾತಿಗಳಿಸಿರುವ ತಿರುಪತಿ ದೇವಾಲಯಕ್ಕೆ ಈಗಾಗಲೇ ಪ್ರತಿವರ್ಷ ಸುಮಾರು 1 ಟನ್ ಚಿನ್ನ ಭಕ್ತರಿಂದಲೇ ಹರಿದು ಬರುತ್ತಿದೆ. ಪ್ರಸ್ತುತ ದೇಗುಲದ ಅಸ್ತಿಯಲ್ಲಿರುವ 5.5 ಟನ್ ರಷ್ಟು ಚಿನ್ನವನ್ನು ಯೋಜನೆಗೆ ವಿನಿಯೋಗಿಸಲು ಚಿಂತನೆ ನಡೆಸಲಾಗುತ್ತಿದ್ದು, ಈ ಮೂಲಕ ಚಿನ್ನವನ್ನು ನಗದಾಗಿ ಪರಿವರ್ತಿಸಲಾಗುತ್ತದೆ. ಚಿನ್ನ ನಗದೀಕರಣ ಯೊಜನೆಯೊಂದು ಉತ್ತಮ ಯೋಜನೆಯಾಗಿದೆ. ಈ ಬಗ್ಗೆ ಈಗಾಗಲೇ ದೇಗುಲ ಸಮತಿಗೆ ಸೂಚನೆ ನೀಡಲಾಗಿದೆ ಎಂದು ಆಂಧ್ರಪ್ರದೇಶದ ವಿತ್ತ ಸಚಿವ ಯೆನಮಾಲ ರಾಮಕೃಷ್ಣನಾಡು ಹೇಳಿದ್ದಾರೆ.
Advertisement