ತರಕಾರಿ ಏನೀ ದುಬಾರಿ

ಒಂದು ಕಡೆ ನಿರಂತರ ಸುರಿದ ಜಿಟಿಜಿಟಿ ಮಳೆ, ಇನ್ನೊಂದೆಡೆ ನೆರೆ ರಾಜ್ಯಗಳಲ್ಲಿ ತರಕಾರಿಗಳಿಗೆ ಏರುತ್ತಿರುವ ಬೇಡಿಕೆಯಿಂದಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಒಂದು ಕಡೆ ನಿರಂತರ ಸುರಿದ ಜಿಟಿಜಿಟಿ ಮಳೆ, ಇನ್ನೊಂದೆಡೆ ನೆರೆ ರಾಜ್ಯಗಳಲ್ಲಿ ತರಕಾರಿಗಳಿಗೆ ಏರುತ್ತಿರುವ ಬೇಡಿಕೆಯಿಂದಾಗಿ ರಾಜ್ಯದ ದಕ್ಷಿಣದ ಜಿಲ್ಲೆಗಳಲ್ಲಿ ತರಕಾರಿ ಬೆಲೆ ವಿಪರೀತ ಏರುತ್ತಿದೆ. 
ಕೇವಲ ಈರುಳ್ಳಿ ಬೆಲೆಯಿಂದ ಮಾತ್ರ ಫಜೀತಿಗೆ ಈಡಾಗುತ್ತಿದ್ದ ಗ್ರಾಹಕರು ಈಗ ಎಲ್ಲಾ ರೀತಿಯ ತರಕಾರಿ, ಸೊಪ್ಪುಗಳ ದರ ಏರಿಕೆ ಬಿಸಿ ಅನುಭವಿಸುವಂತಾಗಿದೆ. ಕೇವಲ ಮೂರ್ನಾಲ್ಕು ತಿಂಗಳ ಹಿಂದೆ ಮಳೆಯ ಅಭಾವದಿಂದಾಗಿ ತರಕಾರಿ ಬೆಲೆ ಏರಿಕೆಯಾಗಿತ್ತು. ಈಗ ಅತಿಯಾದ ಮಳೆ ತರಕಾರಿಯನ್ನು ದುಬಾರಿಯಾಗಿಸಿದೆ. ಕೈಗೆ ಬರಬೇಕಿದ್ದ ಬೆಳೆ ಗಿಡದಲ್ಲೇ ಕೊಳೆತುಹೋಗಿದೆ. 
ಎರಡು ಬಾರಿ ಏರಿಕೆ: ಕಳೆದ ವಾರ ತರಕಾರಿ ಬೆಲೆ ಎರಡು ಬಾರಿ ಏರಿಕೆ ಕಂಡಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ರಾಜ್ಯದ ದಕ್ಷಿಣದ ಜಿಲ್ಲೆಗಳಲ್ಲಿ ಅನಿರೀಕ್ಷಿತ ಹಾಗೂ ನಿರಂತರವಾಗಿ ಸುರಿದ ಮಳೆ, ಮೋಡ ಮುಸುಕಿದ ವಾತಾವರಣದಿಂದಾಗಿ ಮಾರುಕಟ್ಟೆಯಲ್ಲಿರಬೇಕಿದ್ದ ಬೆಳೆ  ಹೊಲದಲ್ಲೇ ಕೊಳೆಯುತ್ತಿದೆ.
ನಿರೀಕ್ಷಿತ ಪ್ರಮಾಣದಲ್ಲಿ ತರಕಾರಿ ಮಾರುಕಟ್ಟೆಗೆ ಬಾರದಿರುವುದು ಒಂದೆಡೆಯಾದರೆ, ಅಕ್ಕಪಕ್ಕದ ರಾಜ್ಯಗಳಲ್ಲಿ ಭಾರಿ ಮಳೆ ಪರಿಣಾಮ, ಅಲ್ಲಿಂದಲೂ ಬೇಡಿಕೆ ಹೆಚ್ಚಿದೆ. ಹೀಗಾಗಿ, ಎಲ್ಲಾ ರೀತಿಯ ತರಕಾರಿಗಳ ಬೆಲೆಗಳೂ ಏರತೊಡಗಿದೆ. ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ಹಾಸನ, ಚಾಮರಾಜನಗರ, ಮಂಡ್ಯ ಸೇರಿದಂತೆ ಹಳೇ ಮೈಸೂರು ಭಾಗಗಳಿಂದ ಬೆಂಗಳೂರಿಗೆ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜಾಗುತ್ತದೆ. 
ಉತ್ತಮ ದರ ಸಿಗುತ್ತಿರುವುದರಿಂದ ಬೆಳೆಗಾರರು ನೆರೆಯ ರಾಜ್ಯಗಳ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ತರಕಾರಿ ಕಳಿಸುತ್ತಿದ್ದಾರೆ. ಕೆಲವು ತರಕಾರಿಗಳು ಆಂಧ್ರದಿಂದ ಬರುತ್ತಿದ್ದವು ಆದರೆ ಚಂಡಮಾರುತದಿಂದಾಗಿ ಅಲ್ಲಿಂದ ತರಕಾರಿ ಬರುತ್ತಿಲ್ಲ. ಇದರಿಂದ ನಗರದಲ್ಲಿ ತರಕಾರಿ ಕೊರತೆ ಹೆಚ್ಚುತ್ತಿದೆ ಎನ್ನುತ್ತಾರೆ ನಗರದ ತರಕಾರಿ ವ್ಯಾಪಾರಿಗಳು. ಸೊಪ್ಪು, ಆಲೂಗಡ್ಡೆ, ಬದನೆ, ಹೈಬ್ರಿಡ್ ಟೊಮೆಟೋ, ಹೂಕೋಸು, ಬೆಳ್ಳುಳ್ಳಿ, ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. 
ಮತ್ತೊಂದು ಕಡೆ ಈ ಬೆಲೆ ಹೆಚ್ಚಳದ ಲಾಭ ಬೆಳೆಗಾರರ ಕೈಸೇರದೆ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಚಿಲ್ಲರೆ ವ್ಯಾಪಾರಿಗಳಿಗಿಂತ ಹಾಪ್‍ಕಾಮ್ಸ್  ತರಕಾರಿ ಬೆಲೆ ಕೊಂಚ ಕಡಿಮೆ. ಚಿಲ್ಲರೆ ವ್ಯಾಪಾರಿ ಮಳಿಗೆಗಳಿಗಿಂತ ಹಾಪ್ ಕಾಮ್ಸ್ ನಲ್ಲಿ ದರ ಕೆಜಿಗೆ ಸುಮಾರು ರು.4-5 ಕಡಿಮೆಯಿದೆ. ಇದೊಂದೆ ಗ್ರಾಹಕರಿಗೆ ಸಮಾಧಾನ ತಂದಿರುವ ಅಂಶ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com