ಸೈರಸ್ ಮಿಸ್ಟ್ರಿ ಕಂಪೆನಿಗೆ ಸಾಕಷ್ಟು ಹಾನಿಯನ್ನುಂಟುಮಾಡಿದ್ದಾರೆ: ಟಿಸಿಎಸ್

ಪದಚ್ಯುತ ಅಧ್ಯಕ್ಷ ಸೈರಸ್ ಮಿಸ್ಟ್ರಿ ತಮ್ಮ ನಡತೆಯಿಂದ ಕಂಪೆನಿಗೆ, ಷೇರುದಾರರಿಗೆ...
ಸೈರಸ್ ಮಿಸ್ಟ್ರಿ
ಸೈರಸ್ ಮಿಸ್ಟ್ರಿ
ನವದೆಹಲಿ: ಪದಚ್ಯುತ ಅಧ್ಯಕ್ಷ ಸೈರಸ್ ಮಿಸ್ಟ್ರಿ ತಮ್ಮ ನಡತೆಯಿಂದ ಕಂಪೆನಿಗೆ, ಷೇರುದಾರರಿಗೆ, ಮಧ್ಯಸ್ಥಗಾರರಿಗೆ ಮತ್ತು ನೌಕರರಿಗೆ ಸಾಕಷ್ಟು ಹಾನಿಯನ್ನುಂಟುಮಾಡಿದ್ದು ಅವರನ್ನು ಕಂಪೆನಿಯ ಮಂಡಳಿಯಿಂದ ತೆಗೆದುಹಾಕಬೇಕೆಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಹೇಳಿದೆ.
ತನ್ನ ಷೇರುದಾರರಿಗೆ ಈ ಕುರಿತು ನೊಟೀಸ್ ಕಳುಹಿಸಿರುವ ಟಿಸಿಎಸ್, ಮಿಸ್ಟ್ರಿಯವರು ಟಾಟಾ ಸನ್ಸ್ ನ ವಿಶ್ವಾಸವನ್ನು ಕಳೆದುಕೊಂಡಿದ್ದು ಅವರನ್ನು ಕೂಡಲೇ ಮಂಡಳಿಯಿಂದ ತೆಗೆದುಹಾಕಬೇಕೆಂದು ಹೇಳಿದೆ. ಮಿಸ್ಟ್ರಿಯವರು ಟಾಟಾ ಸನ್ಸ್ ನಲ್ಲಿ ಅತಿದೊಡ್ಡ ಪಾಲನ್ನು ಹೊಂದಿದ್ದು ಟಾಟಾ ಗ್ರೂಪ್ ನ 103 ಶತಕೋಟಿಯಷ್ಟು ಬಂಡವಾಳ ಅವರದ್ದಾಗಿದೆ.
ಮಿಸ್ಟ್ರಿಯವರು ರತನ್ ಟಾಟಾ ನೇತೃತ್ವದ ಟಾಟಾ ಸನ್ಸ್ ಬ್ರಾಂಡ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನೊಟೀಸ್ ನಲ್ಲಿ ಆಪಾದಿಸಿದೆ.
ಶೇಕಡಾ 73.26ರಷ್ಟು ಪಾಲುದಾರಿಕೆಯನ್ನು ಹೊಂದಿದ್ದ ಮಿಸ್ಟ್ರಿಯವರನ್ನು ಕಂಪೆನಿಯ ಅಧ್ಯಕ್ಷ ಸ್ಥಾನದಿಂದ ರತನ್ ಟಾಟಾ ಕಳೆದ ತಿಂಗಳು ವಜಾಗೊಳಿಸಿದ್ದರು. ಇದೀಗ ಕಂಪೆನಿಯ ಷೇರುದಾರರ ಅತಿ ವಿಶೇಷ ಸಾಮಾನ್ಯ ಸಭೆ ನಡೆಸಿ ಮಂಡಳಿಯ ನಿರ್ದೇಶಕ ಸ್ಥಾನದಿಂದ ಸೈರಸ್ ಮಿಸ್ಟ್ರಿಯವರನ್ನು ತೆಗೆದುಹಾಕುವ ಬಗ್ಗೆ ಪರಿಗಣಿಸಬೇಕೆಂದು ಟಿಸಿಎಸ್ ಹೇಳಿದೆ.
ಕಳೆದ ವಾರ ನಡೆದ ಕಂಪೆನಿಯ ಮಂಡಳಿ ಸಭೆಯಲ್ಲಿ ಮಿಸ್ಟ್ರಿಯವರು ಗೈರುಹಾಜರಾಗಿದ್ದರು. ಡಿಸೆಂಬರ್ 13ರಂದು ವಿಶೇಷ ಸಾಮಾನ್ಯ ಸಭೆಯನ್ನು ಟಿಸಿಎಸ್ ಕರೆದಿದೆ.
ತಮ್ಮನ್ನು ಟಾಟಾ ಸನ್ಸ್ ನ ಕಾರ್ಯಕಾರಿ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ ನಂತರ ಮಿಸ್ಟ್ರಿಯವರು ಕೆಲವು ಆಧಾರರಹಿತ ಆರೋಪಗಳನ್ನು ಮಾಡಿದ್ದು, ಅದರಿಂದ ಟಾಟಾ ಸನ್ಸ್ ಲಿಮಿಟೆಡ್ ಮತ್ತು ನಿರ್ದೇಶಕರ ಮಂಡಳಿಗೆ ಮಾತ್ರ ಗೌರವಕ್ಕೆ ಧಕ್ಕೆಯುಂಟಾಗಿರುವುದಲ್ಲದೆ ಇಡೀ ಟಾಟಾ ಗ್ರೂಪ್ ನ ಖ್ಯಾತಿಗೆ ಧಕ್ಕೆಯುಂಟಾಗಿದೆ ಎಂದು ನೊಟೀಸ್ ನಲ್ಲಿ ಟಾಟಾ ಸನ್ಸ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com