ಊರ್ಜಿತ್ ಪಟೇಲ್
ಊರ್ಜಿತ್ ಪಟೇಲ್

ಪ್ರಾಮಾಣಿಕ ಜನರ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಲು ಆರ್ ಬಿಐ ಬದ್ಧ: ಊರ್ಜಿತ್ ಪಟೇಲ್

ಅಧಿಕ ಮೌಲ್ಯದ ನೋಟುಗಳ ರದ್ಧು ಕುರಿತು ತಮ್ಮ ಮೌನ ಮುರಿದಿರುವ ಆರ್ ಬಿಐ ಗವರ್ನರ್...
ಮುಂಬೈ: ಅಧಿಕ ಮೌಲ್ಯದ ನೋಟುಗಳ ರದ್ಧು ಕುರಿತು ತಮ್ಮ ಮೌನ ಮುರಿದಿರುವ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್, ಕೇಂದ್ರೀಯ ಬ್ಯಾಂಕ್ ಸದ್ಯದ ಪರಿಸ್ಥಿತಿಯನ್ನು ದಿನನಿತ್ಯ ಗಮನಿಸುತ್ತಿದ್ದು ನಾಗರಿಕರ ನಿಜವಾದ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಸ್ಥಿತಿ ಆದಷ್ಟು ಶೀಘ್ರದಲ್ಲಿ ಸಹಜ ಸ್ಥಿತಿಗೆ ಮರಳಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
1000 ಮತ್ತು 500 ಮುಖಬೆಲೆಯ ನೋಟುಗಳ ಚಲಾವಣೆ ಹಿಂತೆಗೆತದ ನಂತರ ಬ್ಯಾಂಕುಗಳಲ್ಲಿ ಠೇವಣಿ ಹೂಡಿಕೆ ಹೆಚ್ಚಾಗಿರುವುದರಿಂದ ನಗದು ಮೀಸಲು ಅನುಪಾತ ಶೇಕಡಾ 100ರಷ್ಟು ಏರಿಕೆಯಾಗಿದೆ. ಸ್ಥಿರ ಮಾರುಕಟ್ಟೆ ಯೋಜನೆಯನ್ನು ಸರ್ಕಾರ ಬಿಡುಗಡೆ ಮಾಡಿದ ನಂತರ ಆರ್ ಬಿಐ ತನ್ನ ನಿರ್ಧಾರವನ್ನು ಪರಾಮರ್ಶಿಸಲಿದೆ ಎಂದು ಹೇಳಿದರು.
ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಊರ್ಜಿತ್ ಪಟೇಲ್, 500, 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಆರ್ ಬಿಐ ಪರಿಸ್ಥಿತಿಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದೆ. ನೋಟು ಮುದ್ರಣಾಲಯಗಳು 100 ಮತ್ತು 500 ಮುಖಬೆಲೆಯ ನೋಟುಗಳನ್ನು ತಯಾರಿಸಿ ನೋಟುಗಳ ಕೊರತೆಯನ್ನು ಸರಿದೂಗಿಸಲು ಪ್ರಯತ್ನಿಸುತ್ತಿದೆ.
ಜನರು ಇನ್ನು ಮುಂದೆ ಹೆಚ್ಚೆಚ್ಚು ಡೆಬಿಟ್ ಕಾರ್ಡುಗಳು, ಡಿಜಿಟಲ್ ವ್ಯಾಲೆಟ್ ಗಳನ್ನು ಬಳಸುವಂತೆ ಮತ್ತು ದೀರ್ಘಾವಧಿಯಲ್ಲಿ ನಗದಿಗಿಂತ ಪ್ಲಾಸ್ಟಿಕ್ ಹಣ ಮೂಲಕ ವ್ಯವಹಾರಗಳನ್ನು ಮಾಡಿ ಸುಗಮಗೊಳಿಸುವಂತೆ ಹೇಳಿದರು. 
ಆರ್ ಬಿಐ ಬ್ಯಾಂಕುಗಳೊಂದಿಗೆ ದಿನನಿತ್ಯ ಸಂವಾದ ನಡೆಸುತ್ತಿದೆ. ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ ಎಂದು ಬ್ಯಾಂಕುಗಳು ಹೇಳುತ್ತಿವೆ. ಬ್ಯಾಂಕುಗಳು ಮತ್ತು ಎಟಿಎಂಗಳ ಮುಂದೆ ಸರದಿಯಲ್ಲಿ ನಿಲ್ಲುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ವ್ಯವಹಾರ ಆರಂಭವಾಗುತ್ತಿದೆ. ಪ್ರತಿನಿತ್ಯದ ವಸ್ತುಗಳ ಬಳಕೆಗೆ ಕೊರತೆಯಿಲ್ಲ. ಆರ್ ಬಿಐ ಮತ್ತು ಸರ್ಕಾರ ಎರಡೂ ಕೂಡ ನೋಟುಗಳ ಪ್ರಿಂಟಿಂಗ್ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com