ಮುಂಬೈ: ಆರ್ಥಿಕ ವಿಚಾರದಲ್ಲಿ ಜಿ20 ರಾಷ್ಟ್ರಗಳಲ್ಲಿ ಭಾರತ ದೇಶ ಹೆಚ್ಚು ಪಾರದರ್ಶಕವಾಗಬೇಕು ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದೆ.
ಬಜೆಟ್ ನಲ್ಲಿ ನಿಗದಿಪಡಿಸಿದ ಹಣಕಾಸಿನ ಗುರಿಯನ್ನು ತಲುಪುವಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತ ಸರ್ಕಾರ ವಿಫಲವಾಗುತ್ತಿದ್ದು ವಿಶ್ವಾಸಾರ್ಹ ಹಣಕಾಸಿನ ಬಲವರ್ಧನೆಯ ಅಗತ್ಯವಿದೆ ಎಂದು ಐಎಂಎಫ್ ನ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಪೊರೇಟ್ ತೆರಿಗೆ ಕಡಿತ ವಿಚಾರದಲ್ಲಿ 1.45 ಲಕ್ಷ ಕೋಟಿ ತೆರಿಗೆ ನಷ್ಟವನ್ನು ಸರ್ಕಾರ ಹೇಗೆ ಭರಿಸುತ್ತದೆ ಎಂದು ಹೇಳಿಲ್ಲ, ಆ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಕೂಡ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಣಕಾಸಿನ ಪಾರದರ್ಶಕತೆ ಹೆಚ್ಚಾಗಬೇಕು. ಸರ್ಕಾರದ ಹಣಕಾಸಿನ ನಿಲುವೇನು ಎಂದು ಖಾಸಗಿ ವಲಯಗಳಿಗೆ ತಿಳಿದುಕೊಳ್ಳಲು ಕಷ್ಟವಾಗುತ್ತಿದೆ ಎಂದು ಹಣಕಾಸು ನಿಧಿಯ ಉಪ ನಿರ್ದೇಶಕಿ ಆನ್-ಮೇರಿ ಗುಲ್ಡೆ ರಾಷ್ಟ್ರೀಯ ಷೇರು ಸೂಚ್ಯಂಕ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ವಿಶ್ವಾಸಾರ್ಹ ಹಣಕಾಸಿನ ಬಲವರ್ಧನೆಯ ಕ್ರಮದಿಂದ ತುಲನಾತ್ಮಕವಾಗಿ ಉನ್ನತ ಮಟ್ಟದ ಸಾಲವನ್ನು ಕಡಿಮೆ ಮಾಡಲು ಮತ್ತು ಖಾಸಗಿ ವಲಯಕ್ಕೆ ಆರ್ಥಿಕ ಸಂಪನ್ಮೂಲಗಳನ್ನು ಮುಕ್ತಗೊಳಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
Advertisement