ನವದೆಹಲಿ: 2009 ಮತ್ತು 2011ರ ನಡುವೆ ಐಸಿಐಸಿಐ ಬ್ಯಾಂಕ್ನಿಂದ 3,000 ಕೋಟಿ ರೂಪಾಯಿಗೂ ಹೆಚ್ಚು ಸಾಲ ವಿತರಣೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ವಿಡಿಯೋಕಾನ್ ಸಮೂಹದ ಮಾಜಿ ಮುಖ್ಯಸ್ಥ ವೇಣುಗೋಪಾಲ್ ಧೂತ್ ಅವರನ್ನು ಸೋಮವಾರ ಬೆಳಗ್ಗೆ ಮುಂಬೈನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಸಿಬಿಐ ತನಿಖೆ ನಡೆಸುತ್ತಿರುವ ಇದೇ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್ನ ಮಾಜಿ ಸಿಇಒ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚಾರ್ ಅವರ ಬಂಧನದ ಬೆನ್ನಲ್ಲೇ ಇಂದು ಈ ಬೆಳವಣಿಗೆ ನಡೆದಿದೆ. ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಧೂತ್ನನ್ನು ಹಾಜರುಪಡಿಸಲಾಗುವುದು.
ಚಂದಾ ಕೊಚ್ಚರ್ ಐಸಿಐಸಿಐ ಬ್ಯಾಂಕ್ ಮುಖ್ಯಸ್ಥರಾಗಿದ್ದ ಸಮಯದಲ್ಲಿ ವಿಡಿಯೋಕಾನ್ ಗ್ರೂಪ್ಗೆ ಸಾಲ ಮಂಜೂರಾಗಿತ್ತು. ಈ ಸಾಲವನ್ನು ಅನುತ್ಪಾದಕ ಆಸ್ತಿ ವರ್ಗಕ್ಕೆ ವರ್ಗಾಯಿಸಲಾಗಿದ್ದು, ಐಸಿಐಸಿಐ ಬ್ಯಾಂಕ್ಗೆ 1,750 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ಸಿಬಿಐ ಆರೋಪಿಸಿದೆ.
ಚಂದಾ ಕೊಚ್ಚರ್ ಅವರ ಅಧಿಕಾರಾವಧಿಯಲ್ಲಿ ವಿಡಿಯೋಕಾನ್ ಗ್ರೂಪ್ಗೆ ನೀಡಲಾದ ಸಾಲದಿಂದ ಐಸಿಐಸಿಐ ಬ್ಯಾಂಕ್ಗೆ 1,730 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಸಿಬಿಐ ನ್ಯಾಯಾಲಯದ ಮುಂದೆ ಹೆಚ್ಚಿನ ತನಿಖೆಗೆ ಕೋರಿ ಸಲ್ಲಿಸಿತ್ತು.
ಚಂದಾ ಕೊಚ್ಚಾರ್ ಐಸಿಐಸಿಐ ಬ್ಯಾಂಕ್ನ ಜವಾಬ್ದಾರಿ ವಹಿಸಿಕೊಂಡಾಗ, ವಿಡಿಯೋಕಾನ್ನ ವಿವಿಧ ಕಂಪನಿಗಳಿಗೆ ಆರು ಸಾಲಗಳನ್ನು ಮಂಜೂರು ಮಾಡಲಾಗಿತ್ತು, ಅದರಲ್ಲಿ ಚಂದಾ ಕೊಚ್ಚಾರ್ ಸದಸ್ಯರಾಗಿದ್ದ ಸಮಿತಿಗಳಿಂದ ಕನಿಷ್ಠ ಎರಡು ಸಾಲಗಳನ್ನು ಮಂಜೂರು ಮಾಡಲಾಗಿತ್ತು ಎಂದು ಸಂಸ್ಥೆ ಆರೋಪಿಸಿದೆ. ಇತರ ನಿದರ್ಶನಗಳಲ್ಲಿ, ವಿಡಿಯೋಕಾನ್ ಗ್ರೂಪ್ಗೆ ಸಾಲ ಮಂಜೂರು ಮಾಡಲು ಸಮಿತಿಗಳ ಮೇಲೂ ಅವರು ಪ್ರಭಾವ ಬೀರಿದ್ದಾರೆ ಎಂದು ಸಿಬಿಐ ಹೇಳಿದೆ.
2009ರಲ್ಲಿ ದೀಪಕ್ ಕೊಚ್ಚರ್ ಅವರ ಸಂಸ್ಥೆಯಾದ ನುಪವರ್ಗೆ ವಿಡಿಯೋಕಾನ್ ಸಮೂಹದಿಂದ 64 ಕೋಟಿ ರೂಪಾಯಿ ಸಾಲ ನೀಡಲಾಗಿದೆ ಎಂದು ಸಿಬಿಐ ಆರೋಪಿಸಿದೆ. 1996 ರಲ್ಲಿ ಸುಮಾರು 5.25 ಕೋಟಿ ರೂಪಾಯಿ ಮೌಲ್ಯದ ಮುಂಬೈನ ಫ್ಲಾಟ್ ನ್ನು 2016 ರಲ್ಲಿ ಕೊಚ್ಚರ್ ಅವರ ಫ್ಯಾಮಿಲಿ ಟ್ರಸ್ಟ್ಗೆ ಒಂದು ಕೋಟಿಗಿಂತ ಕಡಿಮೆ ಬೆಲೆಗೆ ವರ್ಗಾಯಿಸಿದ ವಹಿವಾಟಿನ ಬಗ್ಗೆಯೂ ತನಿಖೆ ನಡೆಸುತ್ತಿದೆ ಎಂದು ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.
Advertisement