ನವದೆಹಲಿ: ಮಾನಸಿಕ ಕಾಯಿಲೆಯ ಸಮಸ್ಯೆಗಳನ್ನು ಬಹಿರಂಗ ಪಡಿಸಲು ಸಮಾಜ ಇನ್ನೂ ಏಕೆ ಹಿಂಜರಿಯುತ್ತಿದೆ. ನಾವೆಲ್ಲರೂ ಒಟ್ಟಿಗೆ ಸೇರಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಯುದ್ದವನ್ನು ಗೆಲ್ಲಬೇಕು ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಏರ್ಪಡಿಸಿದ್ದ ಮಾನಸಿಕ ಅಸ್ವಸ್ಥತೆಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ, ಸ್ವತಃ ಖಿನ್ನತೆಯಿಂದ ಬಳಲುತ್ತಿರುವ ನಟಿ ದೀಪಿಕಾ ಪಡುಕೋಣೆ ಮಾತನಾಡಿ, ನಾವು ಯಾವ ರೀತಿಯ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಜಗತ್ತು ತುಂಬಾ ಸ್ಪರ್ಧಾತ್ಮಕವಾಗಿದೆ. ಸೂಕ್ಷ್ಮತೆ ಇಲ್ಲದ ಜನ ನಮ್ಮ ಸುತ್ತ ಇದ್ದಾರೆ. ತಾವು ಸಮಾಜದ ಒಂದು ಭಾಗ, ಸಮಾಜಕ್ಕೆ ಸೇರಿದವರು ಎಂದು ಯಾರೊಬ್ಬರು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.
ತಮಗಿರುವ ಖಿನ್ನತೆ ವಿರುದ್ಧ ತಾವು ಯಾವ ರೀತಿ ಹೋರಾಟ ನಡೆಸುತ್ತಿರುವುದಾಗಿ ಕಾರ್ಯಕ್ರಮದಲ್ಲಿ ಹೇಳುತ್ತಿದ್ದ ವೇಳೆ ದೀಪಿಕಾ ಕಣ್ಣೀರು ಹಾಕಿದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರಿಗೆ ಸ್ನೇಹಿತರಾಗಲೀ, ಕುಟುಂಬಸ್ಥರಾಗಲಿ ಅದರಿಂದ ಹೊರಬರಲು ಅವರಿಗೆ ಸಹಾಯ ಮಾಡುವುದಿಲ್ಲ. ತಮ್ಮ ಗೌರವ ಘನತೆಗೋಸ್ಕರ ಈ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ನಾನು ನನ್ನ ಸಮಸ್ಯೆಯನ್ನು ಮೊದಲ ಬಾರಿಗೆ ಹೇಳಿಕೊಳ್ಳುವಾಗ ನನಗೆ ಯಾವ ನಾಚಿಕೆಯೂ ಆಗಲಿಲ್ಲ. ನಾನು ಸಮಸ್ಯೆಯಿಂದ ಹೊರಬರುವುದು ನನಗೆ ಮುಖ್ಯವಾಗಿತ್ತು, ಹೀಗಾಗಿ ನಾನು ಅನುಭವಿಸುತ್ತಿದ್ದ ಖಿನ್ನತೆ ಸಮಸ್ಯೆಯನ್ನು ಹೇಳಿಕೊಂಡೆ ಎಂದು ಹೇಳಿದ್ದಾರೆ.
ಇದಕ್ಕೆಲ್ಲಾ ಪ್ರಮುಖ ಕಾರಣ ಅಪವಾದ, ಸಮಾಜ ಈ ಅಪವಾದ ಹೊರಿಸುವುದನ್ನು ಬಿಟ್ಟು ಅದರಿಂದ ಹೊರ ಬರಲು ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಮೂಲದ ಲಿವ್ ಲಾಂಗ್ ಲೈಫ್ ಪೌಂಡೇಶನ್ ಹಾಗೂ ಭಾರತೀಯ ಸೈಕ್ರಿಯಾಟ್ರಿಕ್ ಸೊಸೈಟಿ ಜಂಟಿಯಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಇದಾಗಿತ್ತು. ದೀಪಿಕಾ ಪಡುಕೋಣೆ ಭಾರತೀಯ ಸೈಕಿಯಾಟ್ರಿಕ್ ಸೊಸೈಟಿಯ ರಾಯಭಾರಿ ಕೂಡ ಆಗಿದ್ದಾರೆ.
Advertisement