ಡೆಹ್ರಾಡೂನ್: ಉತ್ತರಾಖಂಡದ ಏಳು ಜಿಲ್ಲೆಗಳಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್ ಹಾಗೂ ಸುಶಾಂತ್ ಸಿಂಗ್ ರಜಪೂತ್ ಅಭಿನಯದ 'ಕೇದಾರನಾಥ್' ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.
ಸಿನಿಮಾದಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ಆಗುವ ಸಂಗತಿಗಳು ಇದ್ದು ಬಿಡುಗಡೆಯಾಗದಂತೆ ನಿಷೇಧ ವಿಧಿಸಬೇಕು ಎಂದು ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಎಡಿಜಿ(ಕಾನೂನು ಸುವ್ಯವಸ್ಥೆ) ಅಶೋಕ್ ಕುಮಾರ್ ಅವರು ಹೇಳಿದ್ದಾರೆ.
ಡೆಹ್ರಾಡೂನ್, ಹರಿದ್ವಾರ, ನೈನಿತಾಲ್, ಉಧಾಮ್ ಸಿಂಗ್ ನಗರ, ಪೂರಿ, ತೆಹ್ರಿ ಮತ್ತು ಅಲ್ಮೊರಾದಲ್ಲಿ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ ಎಂದು ಎಡಿಜಿ ತಿಳಿಸಿದ್ದಾರೆ.
ಇಂದು ಬಿಡುಗಡೆಯಾಗಿರುವ ಕೇದಾರನಾಥ್ ಚಿತ್ರದಲ್ಲಿ ಲವ್ ಜಿಹಾದ್ ಪರವಾಗಿ ಚಿತ್ರಿಸಲಾಗಿದ್ದು ಹಿಂದುಗಳ ಧಾರ್ಮಿಕ ಭಾವನೆಗೆ ನೋವುಂಟುಮಾಡುತ್ತದೆ. ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಯಾಗಬಾರದು ಎಂದು ಈ ಏಳು ಜಿಲ್ಲೆಗಳಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಕೇದಾರನಾಥ್ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅವರ ಚೊಚ್ಚಲ ಚಿತ್ರ. ಸತತ ಎರಡು ವರ್ಷಗಳ ಹಿಂದೆ ಕೇದಾರನಾಥ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. 2013ರಲ್ಲಿ ಆ ಪಟ್ಟಣ ಪ್ರವಾಹಕ್ಕೆ ತುತ್ತಾಗಿರುವ ಕಥೆಯನ್ನು ಒಳಗೊಂಡಿದೆ. ಅಭಿಷೇಕ್ ಕಪೂರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.