ಜೈಪುರ: ಕ್ಯಾನ್ಸರ್ ಗೆದ್ದುಬಂದ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಬಾಲಿವುಡ್ ನಟಿ ಲಿಸಾ ರೇ ಅವರೇ ನನಗೆ ಸ್ಫೂರ್ತಿ ಎಂದು ಸಾವನ್ನು ಗೆದ್ದುಬಂದ ಬಾಲಿವುಡ್ ನಟಿ ಮನಿಶಾ ಕೊಯಿರಾಲಾ ಅವರು ಹೇಳಿದ್ದಾರೆ.
ಜೈಪುರ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಮಾತನಾಡಿದ ೪೨ ವರ್ಷದ ಬಾಲಿವುಡ್ ನಟಿ, ತಮ್ಮ ಅನಾರೋಗ್ಯದ ಬಗ್ಗೆ ಮತ್ತು ಕ್ಯಾನ್ಸರ್ ವಿರುದ್ಧದ ಹೋರಾಟದ ಬಗ್ಗೆ ಮಾಧ್ಯಮಗಳೊಂದಿಗೆ ಹಂಚಿಕೊಂಡರು.
ನಾನು ಆನಾರೋಗ್ಯದಿಂದ ಬಳಲುತ್ತಿದ್ದ ವೇಳೆ ಸಕಾರಾತ್ಮಕ ಕಥೆಗಳನ್ನು ಕೇಳಲು ಬಯಸುತ್ತಿದ್ದೆ. ಆದರೆ ಕ್ಯಾನ್ಸರ್ ಗೆದ್ದ ಉದಾಹರಣೆಗಳು ಬಹಳ ಕಡಿಮೆ ಇದ್ದವು. ಇಂದಹ ಸಂದರ್ಭದಲ್ಲಿ ನನಗೆ ಸ್ಫೂರ್ತಿಯಾಗಿದ್ದು, ಯುವರಾಜ್ ಸಿಂಗ್ ಹಾಗೂ ಲಿಸಾ ರೇ ಪ್ರಕರಣಗಳು. ಈ ಸ್ಪೂರ್ತಿಯೇ ನಾನು ಪುಸ್ತಕ ಬರೆಯುವಂತಾಯಿತು ಎಂದರು.
ನನಗೆ ಕ್ಯಾನ್ಸರ್ ಇದೆ ಎಂದು ಮೊದಲು ಗೊತ್ತಾಗಿದ್ದು ಕಠ್ಮಂಡುವಿನ ಆಸ್ಪತ್ರೆಯಲ್ಲಿ. ಆಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಮುಂಬೈನ ವೈದ್ಯರನ್ನು ಭೇಟಿ ಮಾಡಲು ನಿರ್ಧರಿಸಿದೆ. ನಂತರ ಮುಂಬೈನ ವೈದ್ಯರೂ ನನಗೆ ಕ್ಯಾನ್ಸರ್ ಇರುವುದನ್ನು ಖಚಿತಪಡಿಸಿದರು ಎಂದು ಮನಿಶಾ ತಾನು ಮಾರಣಾಂತಿಕ ಕಾಯಿಲೆಗೆ ತುತ್ತಾದ ದಿನಗಳನ್ನು ನೆನಪಿಸಿಕೊಂಡರು.
ಇಂಥಹ ಸಂದರ್ಭದಲ್ಲಿ ಆಘಾತವಾಗುವುದು ಸಹಜ. ಆಗ ನಮ್ಮ ಎದುರು ಎರಡು ಆಯ್ಕೆಗಳಿರುತ್ತವೆ. ಒಂದು ಸಮಸ್ಯೆಗೆ ಪೂರ್ತಿ ಶರಣಾಗಿ ನಿರಾಶರಾಗುವುದ. ಇನ್ನೊಂದು ಸಂಕಷ್ಟದ ಪರಿಸ್ಥಿತಿಯನ್ನು ಒಂದು ಸವಾಲಾಗಿ ಸ್ವೀಕರಿಸುವುದು. ನಾನು ಎರಡನೆಯದ್ದನ್ನು ಆಯ್ದುಕೊಂಡೆ ಎಂದು ವಿವರಿಸಿದರು.
ಇದೇ ವೇಳೆ ತಾವು ಬರೆದ 'ಹೀಲಡ್'(ವಾಸಿಯಾದ) ಪುಸ್ತಕದ ಬಗ್ಗೆಯೂ ಮಾತನಾಡಿದ ೪೨ ವರ್ಷದ ಬಾಲಿವುಡ್ ನಟಿ, ನನ್ನ ಪುಸ್ತಕ ಓದಿದೆ ಎಲ್ಲರಿಗೂ ಧನ್ಯವಾದ. ಅನಾರೋಗ್ಯಕ್ಕಿಡಾದ ವೇಳೆ ನನಗೆ ಬೆಂಬಲವಾಗಿ ನಿಂತ ಬಾಲಿವುಡ್ ಗೆ, ವಿಶೇಷವಾಗಿ ನನ್ನ ಕುಟುಂಬಕ್ಕೆ ಧನ್ಯವಾದ ಎಂದರು.
ಒವೇರಿಯನ್ ಕ್ಯಾನ್ಸರ್ ವಿರುದ್ಧ ಹೋರಾಡಿ ಸಾವು ಗೆದ್ದ ಮನಿಶಾ ಇತ್ತೀಚಿಗಷ್ಟೇ ವಿದೇಶದಿಂದ ಭಾರತಕ್ಕೆ ಹಿಂದಿರುಗಿದ್ದಾರೆ.