
ಮುಂಬೈ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಯುಕೆ ಪ್ರವಾಸವನ್ನು ಮುಂದೂಡಿರುವುದಾಗಿ ಸೋಮವಾರ ಹೇಳಿದ್ದಾರೆ.
'ದಿ ಬಾಲಿವುಡ್ ಬಿಗ್ ಒನ್' ಕಾರ್ಯಕ್ರಮದ ಭಾಗವಾಗಿ ಸಲ್ಮಾನ್ ಖಾನ್ ಅವರು ಮೇ 4 ಮತ್ತು ಮೇ 5 ರಂದು ಮ್ಯಾಂಚೆಸ್ಟರ್ ಮತ್ತು ಲಂಡನ್ನಲ್ಲಿ ಮಾಧುರಿ ದೀಕ್ಷಿತ್ ನೆನೆ, ಟೈಗರ್ ಶ್ರಾಫ್, ವರುಣ್ ಧವನ್, ಕೃತಿ ಸನೋನ್, ಸಾರಾ ಅಲಿ ಖಾನ್, ದಿಶಾ ಪಟಾನಿ, ಸುನಿಲ್ ಗ್ರೋವರ್ ಹಾಗೂ ಮನೀಶ್ ಪಾಲ್ ಅವರೊಂದಿಗೆ ಪ್ರದರ್ಶನ ನೀಡಬೇಕಿತ್ತು.
ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ನೀಡಿರುವ "ಟೈಗರ್ 3" ನಟ ಸಲ್ಲು, "ಈ ದುಃಖದ ಸಮಯದಲ್ಲಿ ಯುಕೆ ಪ್ರವಾಸ ಮುಂದೂಡುವುದೇ ಸರಿ" ಎಂದು ಹೇಳಿದ್ದಾರೆ.
"ಕಾಶ್ಮೀರದಲ್ಲಿ ಇತ್ತೀಚಿನ ದುರಂತ ಘಟನೆಗಳ ಹಿನ್ನೆಲೆಯಲ್ಲಿ ತೀವ್ರ ದುಃಖದಿಂದ, ಮೂಲತಃ ಮೇ 4 ಮತ್ತು 5 ರಂದು ಮ್ಯಾಂಚೆಸ್ಟರ್ ಮತ್ತು ಲಂಡನ್ನಲ್ಲಿ ನಿಗದಿಯಾಗಿದ್ದ ದಿ ಬಾಲಿವುಡ್ ಬಿಗ್ ಒನ್ ಕಾರ್ಯಕ್ರಮಗಳನ್ನು ಮುಂದೂಡುವಂತೆ ಪ್ರವರ್ತಕರನ್ನು ವಿನಂತಿಸಲು ನಾವು ಕಠಿಣ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸಲ್ಮಾನ್ ಖಾನ್ ತಿಳಿಸಿದ್ದಾರೆ.
"ನಮ್ಮ ಅಭಿಮಾನಿಗಳು ಈ ಪ್ರದರ್ಶನಗಳಿಗಾಗಿ ಎದುರು ನೋಡುತ್ತಿದ್ದರು ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದರೂ, ಈ ದುಃಖದ ಸಮಯದಲ್ಲಿ ಅದಕ್ಕೆ ಬ್ರೇಕ್ ನೀಡಲು ನಾವು ನಿರ್ಧರಿಸಿದ್ದೇವೆ. "ಇದರಿಂದ ಉಂಟಾಗಬಹುದಾದ ಯಾವುದೇ ನಿರಾಶೆ ಅಥವಾ ಅನಾನುಕೂಲತೆಗಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಮತ್ತು ನಿಮ್ಮ ಬೆಂಬಲವನ್ನು ತುಂಬಾ ಪ್ರಶಂಸಿಸುತ್ತೇವೆ" ಎಂದು ಪೋಸ್ಟ್ ಮಾಡಿದ್ದಾರೆ.
ಪ್ರದರ್ಶನದ ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಳೆದ ವಾರ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಅನೇಕ ಬಾಲಿವುಡ್ ನಟರಲ್ಲಿ ಸಲ್ಮಾನ್ ಖಾನ್ ಸಹ ಒಬ್ಬರು.
Advertisement