

ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ಸೂರ್ಯವಂಶ' ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಇಶಾ ಕೊಪ್ಪಿಕರ್ ಅವರು ತಮ್ಮನ್ನು ತಾವು ಹೆಮ್ಮೆಯ 'ಅಂಧಭಕ್ತೆ' ಎಂದು ಬಣ್ಣಿಸಿಕೊಂಡಿದ್ದು, ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇದೀಗ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ನಟಿ ಇಶಾ ಕೊಪ್ಪಿಕರ್ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಇಶಾ ಅವರು ತಮ್ಮ ಭಕ್ತಿ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನಿಗೆ ಅಲ್ಲ, ಬದಲಾಗಿ ಭಾರತ ಮತ್ತು ಅದರ ಪ್ರಗತಿಯ ಕಡೆಗೆ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಇಶಾ ಅವರ ವಿಡಿಯೋವನ್ನು ಹಂಚಿಕೊಂಡಿರುವ ಕಂಗನಾ, ನಟಿಯ ಅಭಿಪ್ರಾಯಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದು ಹೇಳಿದ್ದಾರೆ. ಅಲ್ಲದೆ ಅವರು ಒಪ್ಪದ ವಿಷಯಗಳ ವಿರುದ್ಧ ಮಾತನಾಡಿದ ಹಲವಾರು ಸಂದರ್ಭಗಳನ್ನು ಪಟ್ಟಿ ಮಾಡಿದ್ದಾರೆ.
"ವಾವ್!! ನನ್ನ ಮಟ್ಟಿಗೆ ಅವರು ಚೆನ್ನಾಗಿ ವಿವರಿಸಿದ್ದಾರೆ" ಎಂದು ಕಂಗನಾ ತಮ್ಮ ಜೀವನದ ಹಲವಾರು ಉದಾಹರಣೆಗಳನ್ನು ಪಟ್ಟಿ ಮಾಡಿದ್ದಾರೆ.
ಶಾಲಾ ಅಸೆಂಬ್ಲಿಯಲ್ಲಿ ಮಕ್ಕಳನ್ನು ಕೋಲಿನಿಂದ ಹೊಡೆದ ಶಿಕ್ಷಕಿಯ ವಿರುದ್ಧ ಪ್ರತಿಭಟಿಸಿದ್ದನ್ನೂ ಅವರು ನೆನಪಿಸಿಕೊಂಡಿದ್ದು, 26/11 ಮುಂಬೈ ಭಯೋತ್ಪಾದಕ ದಾಳಿ ಮತ್ತು ನಿರ್ಭಯಾ ಪ್ರಕರಣದ ವಿರುದ್ಧವೂ ಪ್ರತಿಭಟಿಸಿದ್ದೆ ಎಂದು ಹೇಳಿದ್ದಾರೆ.
ನಾನು ಹೆಮ್ಮೆಯ ಅಂಧಭಕ್ತೆ
ಇನ್ನು ಇಶಾ ಕೊಪ್ಪಿಕರ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ದೇಶಪ್ರೇಮ ಮತ್ತು ಭಕ್ತಿಯ ಬಗ್ಗೆ ಮಾತನಾಡಿದ್ದಾರೆ. ದೇಶವನ್ನು ಪ್ರೀತಿಸುವುದು ಮತ್ತು ಅದು ಅಭಿವೃದ್ಧಿಯಾಗುವುದನ್ನು ಕಂಡು ಸಂತೋಷಪಡುವುದೇ ಭಕ್ತಿ ಎಂದಾದರೆ. ತಾವು ಭಕ್ತೆ ಎಂದು ಹೇಳಿಕೊಳ್ಳಲು ಯಾವುದೇ ಮುಜುಗರವಿಲ್ಲ ಎಂದು ನಟಿ ಹೇಳಿದ್ದಾರೆ.
ತಮ್ಮನ್ನು ಅಂಧಭಕ್ತೆ ಎಂದು ಕರೆದರೂ ನಾನು ಹೆಮ್ಮೆಪಡುತ್ತೇನೆ ಎಂದು ಹೇಳಿರುವ ಇಶಾ, ಆದರೆ ತಮ್ಮ ಈ ಭಕ್ತಿ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಪಾಲಿಗೆ ದೇಶವೇ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ.
ವಿಡಿಯೋದಲ್ಲಿ ಇಶಾ ಕೊಪ್ಪಿಕರ್ ಮತ್ತೊಂದು ಪ್ರಮುಖ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ದೇಶದ ಮೇಲೆ ಪ್ರೀತಿ ಹೊಂದಿರುವುದೆಂದರೆ ಸರ್ಕಾರದ ಪ್ರತಿಯೊಂದು ನಿರ್ಧಾರವನ್ನೂ ಒಪ್ಪಿಕೊಳ್ಳಬೇಕು ಎಂದಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.
ಸರ್ಕಾರದ ನೀತಿಗಳು ತಪ್ಪು ಎಂದು ಅನಿಸಿದರೆ ಅವುಗಳನ್ನು ಪ್ರಶ್ನಿಸುವ ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕು ತಮಗಿದೆ ಎಂದು ನಟಿ ಹೇಳಿದ್ದಾರೆ. ಆದರೆ ಅದೇ ಸಮಯದಲ್ಲಿ ತಮ್ಮ ದೇಶವನ್ನು ಪೂರ್ಣ ಮನಸ್ಸಿನಿಂದ ಪ್ರೀತಿಸುವುದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.