ಬೆಂಗಳೂರು: ಸುಮಾರು ೨೦ ಕನ್ನಡ ಸಿನೆಮಾಗಳು ಜನವರಿಯಲ್ಲೇ ಬಿಡುಗಡೆ ಕಾಣಲು ಸ್ಪರ್ಧೆಯಲ್ಲಿವೆ. ಏಕೆಂದರೆ ಫೆಬ್ರವರಿಯಲ್ಲಿ ಕ್ರಿಕೆಟ್ ವಿಶ್ವಕಪ್ ಸರಣಿ ಪ್ರಾರಂಭವಾಗಲಿದ್ದು, ಏಪ್ರಿಲ್ ನಲ್ಲಿ ಪರೀಕ್ಷೆಗಳು ಮತ್ತು ಐ ಪಿ ಎಲ್ ಸರಣಿ ಪ್ರಾರಂಭವಾಗುತ್ತದೆ.
ಸದ್ಯಕ್ಕೆ ಬಿಡುಗಡೆ ಕಾಯಂ ಆಗಿರುವ ಚಿತ್ರಗಳು ಇಂತಿವೆ. ಜನವರಿ ೧ ಮತ್ತು ೨ ರಂದು ಕ್ರಮವಾಗಿ ಗಣೇಶ್ ವರ 'ಖುಷಿ ಖುಷಿಯಾಗಿ' ಹಾಗು ಉಪೇಂದ್ರ ಅಭಿನಯದ 'ಶಿವಂ'. ಜನವರಿ ೯ ರಂದು 'ಪೈಪೋಟಿ' ಹಾಗೂ ಜನವರಿ ೧೪ ರಂದು ಜಾಕ್ಸನ್ ಬಿಡುಗಡೆಯನ್ನು ದೃಢೀಕರಿಸಿವೆ.
ಜನವರಿ ೨೩ ಕ್ಕೆ ಸಿದ್ಧಾರ್ಥ, ವಾಸ್ತು ಪ್ರಕಾರ ಹಾಗೂ ಕೃಷ್ಣಾ ಲೀಲಾ ಬಿಡುಗಡೆಯಾಗಲಿವೆ ಎಂಬ ಸುದ್ದಿ ಇದ್ದು ಇನ್ನೂ ಅಧಿಕೃತವಾಗಿ ಘೋಷಣೆಯಾಗಬೇಕಿದೆ.
ಇವಲ್ಲದೆ ಚಿತ್ರಮಂದಿರಗಳ ಮೇಲೆ ಕಣ್ಣಿಟ್ಟಿರುವ ಚಿತ್ರಗಳೆಂದರೆ ಅಭಿನೇತ್ರಿ, ರನ್ನ, ಮೈತ್ರಿ, ಮಳೆ, ಆರ್ ಎಕ್ಸ್ ಸೂರಿ ಮತ್ತು ರುದ್ರಾವತಾರ. ಸದ್ಯದ ವರದಿ ಪ್ರಕಾರ ಸುದೀಪ್ ಅವರ ರನ್ನ ಫೆಬ್ರವರಿಯಲ್ಲಿ ಹಾಗೂ ರಣ ವಿಕ್ರಮ ಮಾರ್ಚ್ ನಲ್ಲಿ ಬಿಡುಗಡೆ ಕಾಣಲಿವೆ.
ಕ್ರಿಕೆಟ್ ವರ್ಲ್ಡ್ ಕಪ್, ಪರೀಕ್ಷೆಗಳು ಕನ್ನಡ ಸಿನೆಮಾಗಳಿಗೆ ಅಡ್ಡಿಪಡಿಸುವುದನ್ನು ಹೊರತು ಪಡಿಸಿ ಪರಭಾಷಾ ಸಿನೆಮಾಗಳು ಕೂಡ ಕನ್ನಡ ಸಿನೆಮಾಗಳ ಪ್ರದರ್ಶನಕ್ಕೆ ತೊಡಕಾಗುತ್ತಿರುವುದು ದುರದೃಷ್ಟಕರ. ಶಂಕರ್ ನಿರ್ದೇಶನ ವಿಕ್ರಮ್ ಅಭಿನಯದ ದೊಡ್ಡ ಬಜೆಟ್ ಚಿತ್ರ "ಐ" ಕೂಡ ಜನವರಿ ೧೫ ಕ್ಕೆ ಬಿಡುಗಡೆಯಾಗುತ್ತಿದ್ದು ಇದು ಕೂಡ ಕನ್ನಡ ಸಿನೆಮಾಗಳಿಗೆ ಪೆಟ್ಟು ಕೊಡಲಿದೆ ಎಂಬುದು ಸಿನೆಮಾ ಪಂಡಿತರ ಅಭಿಪ್ರಾಯ.
Advertisement