ಭಯದಲ್ಲಿ ಕೋಮಲ್

ನೃತ್ಯ ನಿರ್ದೇಶಕರಾಗಿ ಮುರಳಿ ಮಾಸ್ಟರ್ ಅವರದ್ದು ಗಾಂಧಿನಗರಕ್ಕೆ ಚಿರಪರಿಚಿತ...
ಜಗ್ಗೇಶ್  ಮತ್ತು  ಕೋಮಲ್
ಜಗ್ಗೇಶ್ ಮತ್ತು ಕೋಮಲ್

ನೃತ್ಯ ನಿರ್ದೇಶಕರಾಗಿ ಮುರಳಿ ಮಾಸ್ಟರ್ ಅವರದ್ದು ಗಾಂಧಿನಗರಕ್ಕೆ ಚಿರಪರಿಚಿತ ಹೆಸರು. ಆದರೆ, ಈಗ ಅವರು ನಿರ್ದೇಶಕನ ಅವತಾರವೆತ್ತಿ, ಒಂದು ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬಂದಿದ್ದಾರೆ. ನಟ ಕೋಮಲ್ ಅಭಿನಯಿಸುತ್ತಿರುವ 'ನಮೋ ಭೂತಾತ್ಮ' ಚಿತ್ರೀಕರಣ ಮುಗಿಸಿಕೊಂಡು ಇತ್ತೀಚೆಗಷ್ಟೆ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು.

ಮೊನ್ನೆ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮ ಜಗ್ಗೇಶ್ ಮತ್ತು ಕೋಮಲ್ ಸೋದರರ ಭಾವುಕ ಮಾತುಗಳಿಗೆ ವೇದಿಕೆಯಾಯಿತು. ಕೋಮಲ್ ಚಿರತೆ, ಕರಡಿ ಮರಿಯನ್ನು ಓಡಿಸಿಕೊಂಡು ಬರುವ, ಅದಕ್ಕೆ ತಾಯಿ ಕರಡಿಯ ಆಸರೆ ಸಿಕ್ಕಿದ ಕಥೆ ಹೇಳಿ, ನಮ್ಮಣ್ಣ ನನಗೆ ತಾಯಿ ಕರಡಿ ಇದ್ದ ಹಾಗೆ ಎಂದಾಕ್ಷಣ ಪಕ್ಕದಲ್ಲೇ ಕೂತಿದ್ದ ಜಗ್ಗೇಶ್ ಕಣ್ಣಲ್ಲಿ ನೀರು.

ಕಥೆ ಹೇಳಿದ ಕೋಮಲ್ ಕಣ್ಣುಗಳೂ ತೇವಗೊಂಡವು. ಕ್ಷಣ ಕಾಲ ಅಲ್ಲಿ ಮೌನ ಆವರಿಸಿತು. ನಟ ಜಗ್ಗೇಶ್ ಮಾತಿನ ಸರದಿ ಬಂದರೂ ಅವರು ಬೇರೊಬ್ಬರಿಗೆ ಮೈಕ್ ಶಿಫ್ಟ್ ಮಾಡಿಸಿದರು. ಹೀಗಾಗಿ 'ನಮೋ ಭೂತಾತ್ಮ' ಚಿತ್ರದ ಆಡಿಯೋ ಬಿಡುಗಡೆ ಒಂದು ಹಂತದಲ್ಲಿ ಸೋದರರ ಕಣ್ಣೀರ ಸ್ಟೋರಿಗೂ ಸಾಕ್ಷಿಯಾಯಿತು.

ಯಾಕೆ ಈ ಕಣ್ಣೀರು? ಯಾಕೆ ಭಾವುಕ ಮಾತುಗಳು? ಎನ್ನುವ ಪ್ರಶ್ನೆಗಳಿಗೆ ಎಂದಿನಂತೆ ಜಗ್ಗೇಶ್ ಅವರಿಂದ ದೊಡ್ಡ ಸ್ಟೋರಿಯೇ ಹೊರಬಂದರೂ ಅದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಕೋಮಲ್ನ ಒಳ್ಳೆಯತನವನ್ನು ಕೆಲವರು ದುರುಪಯೋಗ ಪಡಿಸಿಕೊಂಡಿದ್ದು, ಅದರಿಂದಲೇ ಅವನ ಸಿನಿಮಾಗಳು ಸೋತಿದ್ದು, ಗಾಂಧಿನಗರದಲ್ಲಿ ಒಳ್ಳೆಯತನಕ್ಕೆ ಜಾಗವಿಲ್ಲದಿದ್ದಾಗ ಮುಗ್ಧನಾಗಿ ವರ್ತಿಸಿದರೆ ಏನಾಗುತ್ತದೆ... ಎಂಬಿತ್ಯಾದಿಯಾಗಿ ಜಗ್ಗೇಶ್, ಬುದ್ಧಿ ಮಾತುಗಳಿಂದ ಕೂಡಿದ ಫ್ಲ್ಯಾಷ್ ಬ್ಯಾಕ್ ಕಥೆ ಬಿಚ್ಚಿಟ್ಟರು.

ಈಗ ಚಿತ್ರದ ಕುರಿತ ಮಾತು. ನಿರ್ದೇಶಕ ಮುರಳಿ ಅವರಿಗೆ 'ನಮೋ ಭೂತಾತ್ಮ' ಒಳ್ಳೆಯ ಅವಕಾಶವಂತೆ. ಇದು ದೆವ್ವದ ಜತೆಗೆ ಕಾಮಿಡಿ ಮತ್ತು ಹಾರರ್ ಅಂಶಗಳನ್ನು ಒಳಗೊಂಡಿರುವ ಒಂದು ಅಪರೂಪದ ಸಿನಿಮಾ ಎಂಬುದು ಮುರಳಿ ಅವರ ವಿವರಣೆ.

ಕಥೆಗೆ ತಕ್ಕಂತೆ ಕೋಮಲ್ ಅವರ ಪಾತ್ರ ಸಂಯೋಜಿಸಿದ್ದು, ತುಂಬಾ ಸಿಂಪಲ್ ಮತ್ತು ಕಾಮಿಡಿಯಾಗಿರುತ್ತದೆ ಎಂಬುದು ಮುರಳಿ ಮಾತು. ಎಲ್ರಿಡ್ ಕುಮಾರ್ ಚಿತ್ರದ ನಿರ್ಮಾಪಕರು. ಎಮಿಲ್ ಅಲಿಯಾಸ್ ಫರಹನ್ ರೋಷನ್ ಚಿತ್ರಕ್ಕೆ ಸಂಗೀತ ನಿರ್ಮಾಣ ಮಾಡುತ್ತಿದ್ದೇವೆಂಬ ಖುಷಿ ಇದೆ' ಎಂದರು ಕುಮಾರ್.

ಐಶ್ವರ್ಯ ಚಿತ್ರದ ನಾಯಕಿ. ಈ ಹಿಂದೆ 'ದಾಸ್ವಾಳ' ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದವರು. ಈ ಹಾರರ್ ಚಿತ್ರದಲ್ಲಿ ಐಶ್ವರ್ಯ ತನ್ನ ಪಾತ್ರದ ಬಗ್ಗೆ ಹೇಳಿಕೊಳ್ಳುವುದಕ್ಕಿಂತ 51 ಸಲ ಥ್ಯಾಂಕ್ಸ್ ಹೇಳಿ ಸುಮ್ಮನಾದರು. ಇನ್ನು ಚಿತ್ರಕ್ಕೆ ರಾಜೇಂದ್ರ ಕಾರಂತ್ ಸಂಭಾಷಣೆ ಬರೆದಿದ್ದಾರೆ. ಮಿ.ಗರಗಸ, ಕಳ್ಮಂಜ ಚಿತ್ರಗಳ ನಂತರ ಮತ್ತೆ ಕೋಮಲ್ ಚಿತ್ರಕ್ಕೆ ಕಥೆ ಬರೆಯುತ್ತಿರುವುದಕ್ಕೆ ರಾಜೇಂದ್ರ ಕಾರಂತ್ ಖುಷಿಯಾದರು.

ಮೊದಲ ಬಾರಿಗೆ ತಮ್ಮ ಸೌಂದರ್ಯ ಲಹರಿ ಬ್ಯಾನರ್ ಬೇರೊಬ್ಬರ ಜತೆಗೂಡಿ ಸಿನಿಮಾ ಮಾಡುತ್ತಿರುವುದಾಗಿ ಕೋಮಲ್ ಪತ್ನಿ ಅನಸೂಯಾ ಹೇಳಿಕೊಂಡರು. ಮಹೇಶ್ ಎಂಬುವರು ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಅಂದ ಹಾಗೆ ಕೋಮಲ್ ಭಯದಲ್ಲಿದ್ದಾರೆಯೇ? ಎನ್ನುವ ಪ್ರಶ್ನೆ ಮೂಡಿದರೆ ಅದು ಅವರ ರಿಯಲ್ ಜರ್ನಿ ಕುರಿತು ಕೇಳುವ ಪ್ರಶ್ನೆ ಅಲ್ಲ. 'ನಮೋ ಭೂತಾತ್ಮ' ಚಿತ್ರದ ತುಣುಕುಗಳನ್ನು ನೋಡಿದಾಗ ಹಾಗೆ ಅನಿಸುವುದು ಸಹಜ. ಮುರಳಿ ಜತೆ ಹಾಡುಗಳಿಗೆ ನೃತ್ಯ ಮಾಡುವಾಗ ಒಳ್ಳೆಯ ಕೆಮೆಸ್ಟ್ರಿ ಇತ್ತು. ಹೀಗಾಗಿ ತಮ್ಮ ಚಿತ್ರವನ್ನು ನಿರ್ದೇಶಿಸಲು ಮುರಳಿಗೆ ಅವಕಾಶ ನೀಡಿರುವುದಾಗಿ ಕೋಮಲ್ ಹೇಳಿಕೊಂಡರು. ನಟ ಜಗ್ಗೇಶ್ ಚಿತ್ರತಂಡಕ್ಕೆ ಶುಭ ಕೋರಲು ಬಂದಿದ್ದರು. ಅಲ್ಲದೆ ಕೋಮಲ್ ಒಳ್ಳೆಯ ನಟ.

ಆದರೆ ಅವನು ವ್ಯವಹಾರದ ಚತುರನಲ್ಲದ ಕಾರಣ ಈ ಸ್ಥಿತಿಗೆ ಬಂದಿದ್ದಾನೆ ಎಂದ ಜಗ್ಗೇಶ್, ಇವನಿಂದಲೇ ಪರಿಚಯವಾದ ಕಾರಣ ಈ ಸ್ಥಿತಿಗೆ ಬಂದಿದ್ದಾನೆ ಎಂದ ಜಗ್ಗೇಶ್, ಇವನಿಂದಲೇ ಪರಿಚಯವಾದ ನಟಿ ಪರೂಲ್ ಯಾದವ್, ನಿರ್ದೇಶಕ ಪವನ್ ಒಡೆಯರ್ ದೊಡ್ಡ ಸ್ಟಾರ್ಗಳ ಹಾಗೆ ಮೆರೆಯುತ್ತಿದ್ದಾರೆ. ಇದು ನಮ್ಮ ಗಾಂಧಿನಗರದ ಕಥೆ ಎಂದು ಬೇಸರ ತೋಡಿಕೊಂಡರು.

ಮುಂದೆ ಅವರ ಮಾತಿನಲ್ಲಿ ಚಿತ್ರರಂಗದ ಬಗ್ಗೆ, ತಮ್ಮ ಏಳುಬೀಳುಗಳ ಚಿತ್ರಣ ಬಂತು. 'ನಮೋ ಭೂತಾತ್ಮ' ಚಿತ್ರದಲ್ಲಿ ಹರೀಶ್ ರಾಜ್, ವಿನಾಯಕ್ ಜೋಷಿ, ಗಾಯಿತ್ರಿ, ನಿಖಿತಾ ಮುಂತಾದವರು ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com