'ಬುಗುರಿ' ಆಡ್ಸವ್ನು ನಾಳೆ ಬತ್ತಾವ್ನೆ

ಮುಂಗಾರು ಮಳೆಯಲ್ಲಿ ಮಿಂದು ಮಿಂಚಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿ ಸ್ಥಾನ ಭದ್ರಪಡಿಸಿಕೊಂಡ ನಟ ಗಣೇಶ್ ಅವರಿಗೆ ಈಗ ಎಲ್ಲಿಲ್ಲದ ಸಂಭ್ರಮ.
ಬುಗುರಿ ಸಿನೆಮಾದಲ್ಲಿ ಗಣೇಶ್
ಬುಗುರಿ ಸಿನೆಮಾದಲ್ಲಿ ಗಣೇಶ್

ಬೆಂಗಳೂರು: ಮುಂಗಾರು ಮಳೆಯಲ್ಲಿ ಮಿಂದು ಮಿಂಚಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿ ಸ್ಥಾನ ಭದ್ರಪಡಿಸಿಕೊಂಡ ನಟ ಗಣೇಶ್ ಅವರಿಗೆ ಈಗ ಎಲ್ಲಿಲ್ಲದ ಸಂಭ್ರಮ. ಏಕೆಂದರೆ ನಾಳೆ ಅವರ ನಟನೆಯ ೨೫ನೆಯ ಚಲನಚಿತ್ರ 'ಬುಗುರಿ' ಬಿಡುಗಡೆ.

"ನಾವು ಬುಗುರಿ ತಿರುಗಿಸಿದ್ದೇವೆ, ಈಗ ಪ್ರೇಕ್ಷಕರು ಅದನ್ನು ಇಷ್ಟಪಟ್ಟು ತಿರುಗಿಸಬೇಕಷ್ಟೇ" ಎನ್ನುತ್ತಾರೆ ನಟ ಗಣೇಶ್.

"ಅದು ನನ್ನ ಮೊದಲನೆಯ ಸಿನೆಮಾ ಆಗಿರಲಿ ಅಥವಾ ೨೫ನೆಯ ಸಿನೆಮಾ ಆಗಿರಲಿ ನನ್ನ ಶಕ್ತಿ ಮೀರಿ ಪ್ರೇಕ್ಷರನ್ನು ಮನರಂಜಿಸಲು ಪ್ರಯತ್ನಿಸಿದ್ದೇನೆ. ಹಾಗಾಗಿ ನನ್ನ ವೃತ್ತಿಜೀವನದ ಸಿಲ್ವರ್ ಜುಬ್ಲಿ ಸಿನೆಮಾ ಬುಗುರಿ ಆಗಿರುವುದು ನನಗೆ ಸಂತಸ ತಂದಿದೆ ಎನ್ನುತ್ತಾರೆ" ನಟ.

ಜೀವನವನ್ನು ಬುಗುರಿಗೆ ಹೋಲಿಸಿ ತತ್ವಶಾಸ್ತ್ರವನ್ನೂ ಹೇಳುವ ಗಣೇಶ್ "ಜೀವನ ಬುಗುರಿಯಿದ್ದಂತೆ. ನನಗೆ ಪ್ರೇಕ್ಷಕರು ತೋರಿರುವ ಪ್ರೀತಿ ಮತ್ತು ವಿಶ್ವಾಸವನ್ನು ಅವರಿಗೆ ಮತ್ತೆ ನೀಡಲು ಪ್ರಯತ್ನಿಸುತ್ತಿದ್ದೇನೆ" ಎನ್ನುತ್ತಾರೆ.

ಗಣೇಶ್ ಅವರ ಹಿಂದಿನ ಸಿನೆಮಗಳಾದ ಕೃಷ್ಣ ಮತ್ತು ಚೆಲ್ಲಾಟ ಸಿನೆಮಾಗಳ ನಿರ್ದೇಶಕರಾದ ಎಂ ಡಿ ಶ್ರೀಧರ್ ಈ ಸಿನೆಮಾಗೂ ಆಕ್ಷನ್ ಕಟ್ ಹೇಳಿದ್ದಾರೆ. ಎರಿಕಾ ಫರ್ನಾಂಡಿಸ್ ಮತ್ತು ರಿಚಾ ಪಾಣಿ ನಾಯಕ ನಟಿಯರು.

ಉಪ್ಪಿ೨ ಸಿನೆಮಾದ ಜೊತೆಗೇ ಬುಗುರಿ ಬಿಡುಗಡೆ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುವ ಗಣೇಶ್ "ಈ ಹಿಂದೆ ಕೂಡ ಉಪ್ಪಿ ಅವರ ಶಿವಂ ಮತ್ತು ನನ್ನ ಖುಷಿಖುಷಿಯಾಗಿ ಸಿನೆಮಾಗಳು ಒಟ್ಟಿಗೆ ಬಿಡುಗಡೆಯಾಗಿದ್ದವು. ಉಪೇಂದ್ರ ಅವರು ಅದ್ಭುತ ನಿರ್ದೇಶಕ. ಅವರ ಓಂ ಸಿನೆಮಾ ನೋಡಿಕೊಂಡು ಬೆಳೆದವನು ನಾನು. ಅವರು ಏನೇ ಮಾಡಿದರು ನಿಖರತೆ ಇರುತ್ತದೆ" ಎಂದು ಉಪೇಂದ್ರ ಅವರನ್ನು ಕೂಡ ಮನಸಾರೆ ಪ್ರಶಂಸಿಸುತ್ತಾರೆ ಗಣೇಶ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com