ಕನ್ನಡ ಚಿತ್ರ 'ತಿಥಿ'ಗೆ ಲೊಕಾರ್ನೊ ಪ್ರಶಸ್ತಿ
ಮುಂಬೈ: ಕನ್ನಡ ಚಿತ್ರರಂಗಕ್ಕೊಂದು ಗುಡ್ ನ್ಯೂಸ್. ಕನ್ನಡ ನಿರ್ದೇಶಕ ರಾಮ್ ರೆಡ್ಡಿ ಅವರ ಚೊಚ್ಚಲ ಚಿತ್ರ ತಿಥಿ ಸ್ವಿಜರ್ಲೆಂಡ್ ನಲ್ಲಿ ನಡೆದ ಲೋಕಾರ್ನೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 2 ಪ್ರಶಸ್ತಿ ಗಳಿಸಿದೆ.
ಫಿಲ್ಮ್ ಮೇಕರ್ಸ್ ಆಫ್ ದಿ ಪ್ರಸೆಂಜ್ ವಿಭಾಗ ಮತ್ತು ಸ್ವಾಚ್ ಫಸ್ಟ್ ಫೀಚರ್ ಅವಾರ್ಡ್ ಸಿನಿಮಾಕ್ಕೆ ದಕ್ಕಿದೆ. ಈ ಚಲನಚಿತ್ರೋತ್ಸವದಲ್ಲಿ ಭಾರತೀಯ ಚಿತ್ರವೊಂದು ಪ್ರಶಸ್ತಿಗೆ ಆಯ್ಕೆಯಾಗಿರುವುದು 8 ವರ್ಷಗಳಲ್ಲಿ ಇದೇ ಮೊದಲು. ಸ್ಟಾರ್ ನಟ, ನಟಿಯರಿಲ್ಲದ ಕರ್ನಾಟಕದಲ್ಲೇ ಚಿತ್ರೀಕರಣಗೊಂಡ ಈ ಕನ್ನಡ ಚಿತ್ರ ಸ್ವಿಜರ್ಲೆಂಡ್ ನಲ್ಲಿ ನಡೆದ ಚಿತ್ರೋತ್ಸವದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಚಿತ್ರ ಪ್ರದರ್ಶನದ ಬಳಿಕ ಪ್ರೇಕ್ಷಕರು ಎದ್ದುನಿಂತು ಮೆಚ್ಚುಗೆ ವ್ಯಕ್ತಪಡಿಸಿದರು.
ಚೊಚ್ಚಲ ಚಿತ್ರಕ್ಕೆ ಪ್ರಶಸ್ತಿ ದಕ್ಕಿರುವುದಕ್ಕೆ ನಿರ್ದೇಶಕ ರೆಡ್ಡಿ ಸಂತಸ ವ್ಯಕಪಡಿಸಿದ್ದಾರೆ. ಭಾರತದ ಆತ್ಮದ ಸಣ್ಣ ಭಾಗವೊಂದನ್ನು ಚಿತ್ರದ ಮೂಲಕ ಸೆರೆಹಿಡಿಯುವುದು ನನ್ನ ಹಲವು ದಿನಗಳ ಬಯಕೆಯಾಗಿತ್ತು. ಚಿತ್ರದ ಕೆಲವು ಪಾತ್ರಗಳು ನನ್ನ ಪಾಲಿಗೆ ಸಂಕೇತಗಳಾಗಿದ್ದವು. ಈ ಪಾತ್ರಗಳನ್ನು ಚಿರಸ್ಥಾಯಿಗೊಳಿಸುವ ಅವಕಾಶ ಸಿಕ್ಕಿದ್ದಕ್ಕೆ ಕೃತಾರ್ಥನಾಗಿದ್ದೇನೆ. ಈ ಪ್ರಶಸ್ತಿ ಚಿತ್ರದ ಪಯಣಕ್ಕೆ ಉತ್ತಮ ಆರಂಭ ಸಿಕ್ಕಂತಾಗಿದೆ ಎಂದಿದ್ದಾರೆ.