ಶುಭ ಪೂಂಜಾಗೆ ಮತ್ತೆ ಕೈಬೀಸಿ ಕರೆದ ಕಾಲಿವುಡ್; ಹೃದಯಶಿವ ನಿರ್ದೇಶನ

ನಟಿ ಶುಭ ಪೂಂಜಾ ೧೦ ವರ್ಷಗಳ ನಂತರ ಹಾರರ್-ಥ್ರಿಲ್ಲರ್ ಮೂಲಕ ತಮಿಳು ಚಿತ್ರೋದ್ಯಮಕ್ಕೆ ತೆರಳಲಿದ್ದಾರೆ. ಈ ಸಿನೆಮಾವನ್ನು ನಿರ್ದೇಶಿಸುತ್ತಿರುವವರು ಗೀತರಚನಕಾರನಿಂದ
ನಟಿ ಶುಭ ಪೂಂಜಾ
ನಟಿ ಶುಭ ಪೂಂಜಾ

ಬೆಂಗಳೂರು: ನಟಿ ಶುಭ ಪೂಂಜಾ ೧೦ ವರ್ಷಗಳ ನಂತರ ಹಾರರ್-ಥ್ರಿಲ್ಲರ್ ಮೂಲಕ ತಮಿಳು ಚಿತ್ರೋದ್ಯಮಕ್ಕೆ ತೆರಳಲಿದ್ದಾರೆ. ಈ ಸಿನೆಮಾವನ್ನು ನಿರ್ದೇಶಿಸುತ್ತಿರುವವರು ಗೀತರಚನಕಾರನಿಂದ ನಿರ್ದೇಶಕನಾಗಿ ಭಡ್ತಿ ಹೊಂದಿರುವ ಹೃದಯ ಶಿವ. ಹೃದಯ ಶಿವ ಸದ್ಯಕ್ಕೆ ತಮ್ಮ ಚೊಚ್ಚಲ ನಿರ್ದೇಶನದ ಪ್ರೇಮ್ ಮತ್ತು ಹರಿಪ್ರಿಯ ನಟನೆಯ 'ಮೊದಲ ಮಳೆ' ಕನ್ನಡ ಸಿನೆಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

ನಟಿ ಶುಭಾ ಹೇಳುವಂತೆ ಇದು ಮಹಿಳಾ ಕೇಂದ್ರಿತ ಸಿನೆಮಾವಾಗಿದ್ದು ಅವರನ್ನೂ ಒಳಗೊಂಡಂತೆ ಮೂರರಿಂದ ನಾಲ್ಕು ಪಾತ್ರಗಳು ಇರುತ್ತವಂತೆ. "ಹಿರಿಯ ಮಹಿಳೆ, ಪುರುಷ ಪಾತ್ರ ಮತ್ತು ನಾಯಕ ನಟಿ ನನ್ನ ಸುತ್ತ ಕಥೆ ಸುತ್ತುತ್ತದೆ. ಇಬ್ಬರು ಅತಿಥಿ ನಟರು. ಹಿರಿಯ ಮಹಿಳೆಯ ಪಾತ್ರಕ್ಕೆ ತಮಿಳು ಕಲಾವಿದರನ್ನು ನಿರ್ದೇಶಕ ಆಯ್ಕೆ ಮಾಡಲಿದ್ದಾರೆ" ಎನ್ನುತ್ತಾರೆ.

ತಮಿಳು ಚಿತ್ರ 'ಮಚ್ಚಿ' ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಶುಭ, ಕನ್ನಡ ಚಿತ್ರಗಳಿಗೆ ಬರುವುದಕ್ಕೆ ಮುಂಚಿತವಾಗಿ ತಮಿಳಿನಲ್ಲಿ ಎರಡು ಸಿನೆಮಾ ಪೂರೈಸಿದ್ದರು. ಸ್ಕ್ರಿಪ್ಟ್ ನ ತಾಕತ್ತು ಮತ್ತು ನಿರ್ದೇಶಕ ಕೌಶಲ್ಯ ಈ ಸಿನೆಮಾ ಒಪ್ಪಿಕೊಳ್ಳುವಂತೆ ಮಾಡಿತು ಎನ್ನುವ ಶುಭ "ತಮಿಳು ಚಿತ್ರರಂಗದಿಂದ ಹಲವಾರು ಅವಕಾಶಗಳು ಬಂದವು ಆದರೆ ಯಾವೂ ಇಷ್ಟವಾಗಲಿಲ್ಲ. ಎರಡನೇ ನಾಯಕಿಯಾಗಿ ಅಥವಾ ಸಣ್ಣ ಪಾತ್ರಗಳಲ್ಲಿ ನಟಿಸಲು ತಮಿಳು ಚಿತ್ರರಂಗಕ್ಕೆ ಹಿಂದಿರುಗಲು ನನಗೆ ಇಷ್ಟವಿಲ್ಲ. ಕನ್ನಡ ಸಿನೆಮಾಗಳಲ್ಲೆ ನನಗೆ ಖುಷಿ ಇದೆ. ಆದರೆ ಹೃದಯಶಿವ ಕಥೆ ಹೇಳಿದಾಗ ಆಸಕ್ತಿ ಹುಟ್ಟಿತು. ಅಲ್ಲದೆ ನಿರ್ದೇಶಕನನ್ನು ಚೆನ್ನಾಗಿ ಬಲ್ಲೆ" ಎನ್ನುತ್ತಾರೆ.

ಮುಂದಿನವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಸದ್ಯಕ್ಕೆ ಹರ್ಷ ನಿರ್ದೇಶನ 'ಜೈ ಮಾರುತಿ೮೦೦' ಸಿನೆಮಾದ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಮತ್ತೊಂದು ಚಲನಚಿತ್ರ 'ತರ್ಲೆ ನನ್ ಮಕ್ಳು' ಸಿನೆಮಾದ ಬಿಡುಗಡೆಗೆ ಕಾಯುತ್ತಿರುವ ಶುಭ "ನನ್ನ ಮೊದಲ ಆದ್ಯತೆ ಎಂದಿಗೂ ಕನ್ನಡ" ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com