ಚೆನ್ನೈ: ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ವಿವಾದಗಳ ಕುರಿತ ಸಿನೆಮಾ ಎನ್ನಲಾದ "ಯಾರಿವನು" ಚಲನಚಿತ್ರದ ನಿರ್ದೇಶಕ ಮದನ್ ಪಟೇಲ್ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಕನ್ನಡ ಚಲನಚಿತ್ರದ ತಮಿಳು ಡಬ್ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಅವರಿಗೆ ೨೦೦ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿವೆ ಎಂದು ಅವರು ಆಪಾದಿಸಿದ್ದಾರೆ. ಕನ್ನಡದಲ್ಲಿ ಮತ್ತು ತೆಲುಗಿನಲ್ಲಿ 'ಸತ್ಯಾನಂದ' ಹೆಸರಿನಲ್ಲಿ ಈ ಸಿನೆಮಾ ಬಿಡುಗಡೆಯಾಗಿದ್ದಾಗಲೂ ವಿವಾದ ಭುಗಿಲೆದಿತ್ತು.
"ಆ ಎರಡು ರಾಜ್ಯಗಳಲ್ಲೂ ನಿತ್ಯಾನಂದ ಮತ್ತು ಅವರ ಶಿಷ್ಯರು ನನಗೆ ವಿಪರೀತ ತೊಂದರೆ ಕೊಟ್ಟರು ಹಾಗೂ ತಡೆಯಾಜ್ಞೆ ತಂದಿದ್ದರು. ನಾನು ಸೆನ್ಸಾರ್ ಸರ್ಟಿಫಿಕೇಟ್ ತರಲು ಮುಂಬೈ ಗೆ ಹೋಗಬೇಕಾಯಿತು ಹಾಗೂ ನನ್ನ ತಡೆಯಾಜ್ಞೆ ತೆರವಿಗೆ ಹೈಕೋರ್ಟ್ ಗೆ ಕೇಳಿಕೊಳ್ಳಬೇಕಾಯಿತು" ಎಂದಿದ್ದಾರೆ ಮದನ್ ಪಟೇಲ್.
ಕನ್ನಡ ಮತ್ತು ತೆಲುಗಿನಲ್ಲಿ ಸಾಧಾರಣ ಯಶಸ್ಸು ಕಂಡ ಬಳಿಕ ಸಿ ಎನ್ ಎನ್ ಪಿಕ್ಚರ್ಸ್ ಸಂಸ್ಥೆಗೆ ತಮಿಳು ಹಕ್ಕುಗಳನ್ನು ಮಾರಲಾಗಿತ್ತು ಹಾಗೂ ಆರು ತಿಂಗಳ ಮುಂಚೆಯೆ ಎಲ್ಲ ಕೆಲಸಗಳು ಮುಗಿದಿವೆ. ಆದರೂ ಸಿನೆಮಾ ಬಿಡುಗಡೆಯ ಯಾವ ಲಕ್ಷಣಗಳು ಕಾಣುತ್ತಿಲ್ಲ.
Advertisement