ಕನ್ನಡ ಸಿನೆಮಾಗಳಿಗೆ ನಡುಕ ಹುಟ್ಟಿಸಿದ 'ಬಾಹುಬಲಿ'
ಬೆಂಗಳೂರು: ಕನ್ನಡ ಸಿನೆಮಾ ಉತ್ಸಾಹಿಗಳಿಗೆ ಶುಕ್ರವಾರ ಬಿಡುಗಡೆ ಕಾಣಲಿರುವ ರಾಜಮೌಳಿ ನಿರ್ದೇಶನದ ತೆಲುಗು ಸಿನೆಮಾ 'ಬಾಹುಬಲಿ' ತಣ್ಣೀರೆರಚಿದೆ. ಈ ಶುಕ್ರವಾರ ಗಾಂಧಿನಗರ ಯಾವುದೇ ಬಿಡುಗಡೆಗಳಿಲ್ಲದೆ ಸೊರಗಿದೆ. ಅದರ ಮುಂದಿನ ಶುಕ್ರವಾರವೂ ಯಾವುದೇ ಕನ್ನಡ ಸಿನೆಮಾ ಬಿಡುಗಡೆಯಾಗುವುದು ಸಂದೇಹ ಎನ್ನಲಾಗುತ್ತಿದೆ.
ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಬಜೆಟ್ ಸಿನೆಮಾ ಎಂಬ ಖ್ಯಾತಿಗೆ ಒಳಪಟ್ಟಿರುವ ಬಾಹುಬಲಿ ಸಿನೆಮಾದ ನಾಯಕ ನಟ ಪ್ರಭಾಸ್. ಈ ಸಿನೆಮಾದಲ್ಲಿ ಕನ್ನಡ ನಟ ಸುದೀಪ್ ಕೂಡ ನಟಿಸಿದ್ದಾರೆ.
ಸದ್ಯಕ್ಕೆ ಚಲನಚಿತ್ರಮಂದಿರಗಳಲ್ಲಿ ಗಣಪ, ರಂಗಿತರಂಗ, ರನ್ನ, ವಜ್ರಕಾಯ ಮುಂಚೂಣಿಯಲ್ಲಿ ಓಡುತ್ತಿದ್ದರೂ ಬಾಹುಬಲಿಯ ನಂತರ ಇವುಗಳ ಕಲೆಕ್ಷನ್ ಗೆ ಪೆಟ್ಟು ಬೀಳಲಿದೆ ಎಂಬ ಆತಂಕ ಕೂಡ ಕನ್ನಡ ಚಿತ್ರ ನಿರ್ಮಾಪಕರನ್ನು ಕಾಡುತ್ತಿದೆ.
ಇದೇ ಆತಂಕವನ್ನು ವ್ಯಕ್ತಪಡಿಸಿರುವ ರಂಗಿತರಂಗ ನಿರ್ದೇಶಕ ಅನೂಪ್ ಭಂಢಾರಿ ನಮಗೆ 'ಬಾಹುಬಲಿ' ಸಿನೆಮಾ ವಿರುದ್ಧ ಆಕ್ರೋಶವೇನಿಲ್ಲ ಆದರೆ ರಂಗಿತರಂಗ ಬೆಂಗಳೂರು ಮತ್ತು ಮೈಸೂರಿನಲ್ಲಿ ಹೌಸ್ ಫುಲ್ ಓಡುತ್ತಿದ್ದರೂ, ಬಾಹುಬಲಿ ಆಗಮನಕ್ಕಾಗಿ ನಮ್ಮ ಚಿತ್ರದ ಶೋಗಳನ್ನು ಮಲ್ಟಿಪ್ಲೆಕ್ಸ್ ಗಳಲ್ಲಿ ವಾರಾಂತ್ಯದಲ್ಲಿ ಕಡಿತಗೊಳಿಸಿರುವುದು ನಮಗೆ ಘಾಸಿ ಮಾಡಿದೆ ಎಂದು ಫೇಸ್ಬುಕ್ ನಲ್ಲಿ ನೋವು ತೋಡಿಕೊಂಡಿದ್ದಾರೆ.
ಕನ್ನಡ ಸಿನೆಮಾಗಳಿಗೆ ಪೆಟ್ಟು ಬಿಳದಂತೆ ಕನ್ನಡ ಚಿತ್ರ ರಸಿಕರು ಭರವಸೆಯ ಸಿನೆಮಾಗಳಾದ ಗಣಪ ಮತ್ತು ರಂಗಿತರಂಗ ನೋಡಬೇಕೆಂಬುದೇ ನಮ್ಮ ಆಶಯ.