ಗಣೇಶ್ 'ಬುಗುರಿ'ಗೆ ದರ್ಶನ್ ಕಂಠ
ಬೆಂಗಳೂರು: ನಟ ದರ್ಶನ್ ಮತ್ತು ಗಣೇಶ್ ಇಲ್ಲಿಯವರೆಗೂ ಒಟ್ಟಿಗೆ ನಟಿಸಿಲ್ಲವಾದರೂ ಈಗ ದರ್ಶನ್, ಗಣೇಶ್ ಅವರ ೨೫ನೆ ಸಿನೆಮಾ 'ಬುಗುರಿ'ಗೆ ಕಂಠದಾನ ಮಾಡಿದ್ದಾರೆ. ಸಿನೆಮಾದ ಅಂತ್ಯಕ್ಕೆ ದರ್ಶನ್ ಅವರು ನಿರೂಪಕನಾಗಿ ತಮ್ಮ ಕಂಠದಲ್ಲಿ ಪ್ರೀತಿ ಮತ್ತು ಸಾಧನೆಯ ಬಗ್ಗೆ ಮಾತನಾಡಲಿದ್ದಾರಂತೆ.
ನಿರ್ದೇಶಕ ಎಂ ಡಿ ಶ್ರೀಧರ್ ತಿಳಿಸುವ ಹಾಗೆ "ನನ್ನದು ಮತ್ತು ತೂಗೂದೀಪ ಕುಟುಂಬದ ಗೆಳೆತನ ಬಹಳ ಹಿಂದಿನದ್ದು. ನಾನು ದರ್ಶನ್ ಅವರ ಪೋಕರಿ ಮತ್ತು ಬುಲ್ ಬುಲ್ ನಿರ್ದೇಶಿಸಿದ್ದೇನೆ. ಗಣೇಶ್ ಅವರ ೨೫ನೆ ಚಿತ್ರಕ್ಕೆ ಮೊದಲ ಬಾರಿಗೆ ನಿರ್ಮಾಣಕ್ಕೂ ಇಳಿದಿದ್ದು ಕಂಠದಾನದ ಬಗ್ಗೆ ಚಿಂತಿಸಿದಾಗ ಮೊದಲು ಹೊಳೆದದ್ದು ದರ್ಶನ್. ಅವರಿಗೆ ನನ್ನ ಆಸೆ ತಿಳಿಸಿದೆ. ಅವರು ತಕ್ಷಣ ಒಪ್ಪಿಕೊಂಡರು. ಇದು ಸಾಧ್ಯವಾದದ್ದು ನಬ್ಬಿಬ್ಬರ ನಡುವೆ ಇರುವ ಉತ್ತಮ ಬಾಂಧವ್ಯದಿಂದ. ಅವರ ಕಂಠದಲ್ಲಿ, ಸಾಧನೆ ಮತ್ತು ಪ್ರೀತಿ ಇವುಗಳ ಆದ್ಯತೆ ಬಗ್ಗೆ ಅವರು ಸಂದೇಶ ನೀಡಲಿದ್ದಾರೆ" ಎನ್ನುತ್ತಾರೆ.
ಸಿನೆಮಾ ಆಗಲೇ ಸಿದ್ಧವಾಗಿದ್ದು ತೂಗುದೀಪ ವಿತರಕ ಸಂಸ್ಥೆಯಡಿ ವಿತರಣೆಯಾಗಲಿದೆಯಂತೆ. ಜುಲೈ ಕೊನೆಯ ಭಾಗ ಅಥವಾ ಆಗಸ್ಟ್ ಮೊದಲ ಭಾಗದಲ್ಲಿ ಸಿನೆಮಾ ಬಿಡುಗಡೆಯಾಗಲಿದೆ ಎನ್ನುತ್ತಾರೆ ಎಂ ಡಿ ಶ್ರೀಧರ್. ಗಣೇಶ್ ಜೊತೆ 'ಬುಗುರಿ'ಯಲ್ಲಿ ಎರಿಕಾ ಫರ್ನಾಂಡಿಸ್ ಮತ್ತು ರಿಚಾ ಪಾಣಿ ಮುಖ್ಯ ಪಾತ್ರಧಾರಿಗಳು.