ಸೂರಿ ನಿರ್ದೇಶನದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಚಿತ್ರ 'ದೊಡ್ಮನೆ ಹುಡ್ಗ' ಬಿಡುಗಡೆಗೂ ಮುನ್ನವೇ ಭಾರೀ ಕುತೂಹಲ ಹುಟ್ಟಿಸಿದೆ.
ಚಿತ್ರೋದ್ಯಮದ ಮೂಲಗಳ ಪ್ರಕಾರ, ಇನ್ನೂ ಶೂಟಿಂಗ್ ಪೂರ್ಣಗೊಳಿಸದಿರುವ ದೊಡ್ಮನೆ ಹುಡುಗ ಚಿತ್ರದ ವಿತರಣೆ ಹಕ್ಕನ್ನು ರಾಜ್ಯದ ಮೂರು ಕೇಂದ್ರಗಳಲ್ಲಿ ಈಗಾಗಲೇ ಖರೀದಿಸಲಾಗಿದೆ. ಬೆಂಗಳೂರು, ಕೋಲಾರ ಮತ್ತು ತುಮಕೂರುಗಳಲ್ಲಿ, ಮೈಸೂರು ಮತ್ತು ಚಿತ್ರದುರ್ಗದಲ್ಲಿ ವಿತರಣೆ ಹಕ್ಕನ್ನು ವಿತರಕ ಮುನಿರಾಜು 10 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಇನ್ನು ಶಿವಮೊಗ್ಗ, ಮಂಗಳೂರು, ಹೈದರಾಬಾದ್ ಗಳಲ್ಲಿ ಸಹ ವಿತರಣೆ ಹಕ್ಕನ್ನು ಖರೀದಿಸಲು ಅನೇಕರು ಮುಂದೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸೂರಿ ಚಿತ್ರವನ್ನು ದಸರಾ ಹಬ್ಬದ ಹೊತ್ತಿಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ. ಸತ್ಯ ಹೆಗಡೆಯವರ ಛಾಯಾಗ್ರಹಣವಿರುವ ಚಿತ್ರದಲ್ಲಿ ಪ್ರಮುಖ ಕಲಾವಿದರಾದ ಅಂಬರೀಷ್, ಸುಮಲತಾ, ಭಾರತಿ ವಿಷ್ಣುವರ್ಧನ್, ರವಿಶಂಕರ್, ಚಿಕ್ಕಣ್ಣ, ಸಂತೋಷ್, ಅವಿನಾಶ್ ಮೊದಲಾದವರ ದಂಡೇ ಇದೆ. ಈ ಚಿತ್ರ ಸ್ಯಾಂಡಲ್ ವುಡ್ ನ ಇತಿಹಾಸವನ್ನು ಮರುಕಳಿಸುತ್ತದೆ ಎಂದೇ ಹೇಳಲಾಗುತ್ತಿದೆ.
ಇದೇ ಹೊತ್ತಿಗೆ ಸೂರಿ ಹೊಸಬರನ್ನು ಇಟ್ಟುಕೊಂಡು ಕೆಂಡಸಂಪಿಗೆ ಎಂಬ ಪ್ರಯೋಗಾತ್ಮಕ ಚಿತ್ರ ಮಾಡುತ್ತಿದ್ದು, ಇದರ ಹಾಡುಗಳು ಮೊನ್ನೆ ಭಾನುವಾರವಷ್ಟೇ ಮಾರುಕಟ್ಟೆಗೆ ಬಂದಿವೆ.
Advertisement