
ಬೆಂಗಳೂರು: ಗುಣಮಟ್ಟವಲ್ಲದ ಸಿನಿಮಾ ಹಾಗೂ ಚಿತ್ರ ಸಾಹಿತ್ಯವನ್ನು ಕನ್ನಡ ಪ್ರೇಕ್ಷಕರು ತಿರಸ್ಕರಿಸಿದರೆ, ಉತ್ತಮ ಚಿತ್ರಗಳನ್ನು ಮಾಡಲು ಚಿತ್ರರಂಗ ಆದ್ಯತೆ ನೀಡುತ್ತದೆ ಎಂದು ಹಿರಿಯ ಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅಭಿಪ್ರಾಯಪಟ್ಟರು.
ಶುಕ್ರವಾರ ಭಾರತೀಯ ವಿದ್ಯಾಭವನದಲ್ಲಿ ಕರ್ನಾಟಕ ಚಿತ್ರ ರಸಿಕರ ಸಂಘ, ಮಹೇಶ್ ಲಲಿತ ಕಲಾ ಸಂಸ್ಥೆ ಹಾಗೂ ಅನಿಕೇತನ ಕನ್ನಡ ಬಳಗ ಏರ್ಪಡಿಸಿದ್ದ ಕಲಾ ಉತ್ಸವ -2015ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಉತ್ತಮ ಸಾಹಿತ್ಯ, ಸಂಗೀತ ಹಾಗೂ ಚಿತ್ರಕತೆಯಿಲ್ಲದ ಸಿನಿಮಾಗಳನ್ನು ಪ್ರೇಕ್ಷಕರು ನೋಡುತ್ತಿರುವುದರಿಂದಲೇ ಅಂತಹ ಸಿನಿಮಾಗಳು ಬರುತ್ತವೆ. ಅಂತಹ ಸಿನಿಮಾಗಳು ಬೇಡವೆಂದು ಪ್ರೇಕ್ಷಕರು ಸಿಡಿದೆದ್ದು, ಚಿತ್ರಮಂದಿರಗಳನ್ನು ಮುತ್ತಿಗೆ ಹಾಕಿದರೆ, ಆ ಬಗೆಯ ಸಿನಿಮಾಗಳು ನಿರ್ಮಾಣಗೊಳ್ಳುವುದಿಲ್ಲ ಎಂದು ಪ್ರೇಕ್ಷಕನ ಜವಾಬ್ದಾರಿ ಕುರಿತು ಕಿವಿಮಾತು ಹೇಳಿದರು.
ನಿರ್ಮಾಪಕ ಹಾಗೂ ನಿರ್ದೇಶಕರಿಗೂ ಸಿನಿಮಾಗಳನ್ನು ನಿರ್ಮಿಸುವಾಗ ಸಾಮಾಜಿಕ ಜವಾಬ್ದಾರಿ ಇರಬೇಕು. ರಾಜ್ಯದಲ್ಲಿ ಪರಭಾಷಾ ಚಿತ್ರಗಳು ಉತ್ತಮ ಪ್ರದರ್ಶನ ಕಾಣುತ್ತಿವೆ. ಆ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಕನ್ನಡ ಪ್ರೇಕ್ಷಕರು ಪರಭಾಷಾ ಚಿತ್ರಗಳು ನೋಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪಿ.ಶೇಷಾದ್ರಿಯಂತಹವರು ಒಳ್ಳೆಯ ಚಿತ್ರ ನಿರ್ಮಿಸಿದರೂ ಪ್ರೇಕ್ಷಕರು ಬರುತ್ತಿಲ್ಲ. ಅಂತಿಮವಾಗಿ ಪ್ರೇಕ್ಷಕನ ಅಭಿರುಚಿಯ ಮೇಲೆ ಎಲ್ಲವೂ ನಿಂತಿದೆ ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನದ ಗಿಮಿಕ್
ನಾಗರಹೊಳೆ ಚಿತ್ರ ನಿರ್ದೇಶಿಸಿದಾಗ ಯಾವುದೇ ಪ್ರಶಸ್ತಿ ಬರಲಿಲ್ಲ. ಆ ಸಂದರ್ಭದಲ್ಲಿ ಕರ್ನಾಟಕ ಚಿತ್ರರಸಿಕರ ಸಂಘ ಪ್ರಶಸ್ತಿ ನೀಡಿ ಗೌರವಿಸಿತ್ತು. ನಂತರ, ಹಲವು ಪ್ರಶಸ್ತಿ ಬಂದವು ಎಂದು, ಸಂಘ ತಮ್ಮನ್ನು ಗೌರವಿಸಿದ ಕ್ಷಣಗಳನ್ನು ನೆನೆದರು. ಹಿಂದೆ ಪ್ರಶಸ್ತಿ ಪ್ರದಾನ ಸಮಾರಂಭ ಎಂದರೆ ಚಿತ್ರ ನಟ, ನಟಿಯರು ಭಾಗವಹಿಸುತ್ತಿದ್ದರು. ಈಗ ಎಲ್ಲವೂ ಟಿ.ವಿ.ಪರದೆಯಲ್ಲಿರುತ್ತದೆ.
ಟಿ.ವಿಯವರು ಪ್ರಶಸ್ತಿ ನೀಡಿ 25 ಕಂತುಗಳ ಎಪಿಸೋಡ್ ಮಾಡಿ ಮಾರಾಟ ಮಾಡುತ್ತಾರೆ. ಕಲಾವಿದರಿಗೆ ನೇರವಾಗಿ ಪ್ರೇಕ್ಷಕರೆದುರು ದೊರೆಯುವ ಗೌರವ, ಅಭಿನಂದನೆ ಪ್ರಶಸ್ತಿ ಪಡೆದವರಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದರು.
ನಟಿ ಶ್ರುತಿ ಮಾತನಾಡಿ, ಚಿತ್ರರಸಿಕರ ಸಂಘ ಪ್ರಾರಂಭವಾದಾಗಿನಿಂದ ಚಿತ್ರರಂಗಕ್ಕೆ ಬರುವ ಹೊಸ ಕಲಾವಿದನ್ನು ಗುರುತಿಸಿ ಗೌರವಿಸುತ್ತಿದೆ. ಸಂಘ ರಾಷ್ಟ್ರಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅವರನ್ನು ಕಲಾವಿದ ಸಂಚಾರಿ ವಿಜಯ್ ಅವರನ್ನು ಗೌರವಿಸಿದೆ. ಆದರೆ, ಚಿತ್ರಕಲಾವಿದರ ಸಂಸ್ಥೆಯ ಕಾರ್ಯದರ್ಶಿಯಾಗಿ ನಾವು ಸನ್ಮಾನಿಸಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಹಿರಿಯ ನಟ ಶ್ರೀನಾಥ್, ಹರಿವು ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಜುನಾಥ್ ರೆಡ್ಡಿ (ಮಂಸೋರೆ), ಗಾಯಕಿ ನಾಗ ಚಂದ್ರಿಕಾ ಭಟ್, ಡಾ.ವೇಣುಗೋಪಾಲ್ ರಾಮರಾವ್, ನಟಿಯರಾದ ಶ್ರುತಿ, ಭವ್ಯಗೌಡ, ನೇಹಾ ಪಾಟೀಲ್ ಮತ್ತಿತರರಿಗೆ ಪ್ರಶಸ್ತಿ ವಿತರಿಸಲಾಯಿತು. ನಿರ್ಮಾಪಕರಾದ ಮುರಳೀಧರ ಹಾಲಪ್ಪ, ಕೆ.ವಿ.ಹರೀಶ್ ರಾವ್ ಉಪಸ್ಥಿತರಿದ್ದರು.
Advertisement