ಬೆಂಗಳೂರು: ಸ್ಯಾಂಡಲ್ವುಡ್ ನಟಿ, ಮಳೆ ಹುಡುಗಿ ಪೂಜಾ ಗಾಂಧಿ ಅವರು ಒಂದು ಕೋಟಿ ರುಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿ ನಿರ್ಮಾಪ, ಸಹ ನಟ ಹಾಗೂ ಫೈನಾನ್ಶಿಯರ್ ಸುರೇಶ್ ಶರ್ಮಾ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್ಸಿಸಿ)ಗೆ ದೂರು ನೀಡಿದ್ದಾರೆ.
ಪೂಜಾ ಗಾಂಧಿ ಅವರು ತಾವು ನಟಿಸಿ, ನಿರ್ಮಿಸಿದ್ದ 'ಅಭಿನೇತ್ರಿ' ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರೈಸಲು ನನ್ನಿಂದ 1 ಕೋಟಿ ರುಪಾಯಿ ಸಾಲವಾಗಿ ಪಡೆದಿದ್ದರು. ಅಲ್ಲದೆ ಆ ಹಣವನ್ನು ಒಂದು ತಿಂಗಳಲ್ಲಿ ಹಿಂತಿರುಗಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಈಗ ಅವರು ಆ ಹಣವನ್ನು ವಾಪಸ್ ಕೊಡುತ್ತಿಲ್ಲ ಎಂದು ಫೈನಾನ್ಶಿಯರ್ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ.
ಪೂಜಾ ಗಾಂಧಿ ಅವರು ಚಲನಚಿತ್ರ ರಂಗದಲ್ಲಿ ಉತ್ತುಂಗದಲ್ಲಿದ್ದಾರೆಂದು ನಂಬಿ ನಾನು ಅವರಿಗೆ ಅಷ್ಟು ದೊಡ್ಡ ಮೊತ್ತದ ಹಣವನ್ನು ಬಡ್ಡಿರಹಿತ ಸಾಲವಾಗಿ ಕೊಟ್ಟಿದ್ದೆ. ಈಗ ಅಭಿನೇತ್ರಿ ಚಿತ್ರ ಬಿಡುಗಡೆಯಾಗಿದೆ. ಸ್ಯಾಟ್ಲೈಟ್ ರೈಟ್ಸ್ನಿಂದ ಹಣ ಬಂದಿದೆ. ಆದ್ರೆ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಹೀಗಾಗಿ ಅವರನ್ನು ವಾಣಿಜ್ಯ ಮಂಡಳಿಗೆ ಕರೆಯಿಸಿಕೊಂಡು, ನಾನು ಕೊಟ್ಟಿರುವ ಹಣವನ್ನು ವಾಪಸ್ ಕೊಡಿಸಬೇಕು ಎಂದು ಸುರೇಶ್ ಶರ್ಮಾ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂಜಾ ಗಾಂಧಿ, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಚಿತ್ರಕ್ಕೆ ಸಂಬಂಧಿಸಿದ ವಿಚಾರ ಬೇರೆಯವರಿಗೆ ಅನಗತ್ಯ ಎಂದಿದ್ದಾರೆ. ಅಲ್ಲದೆ ನನ್ನ ವೈಯಕ್ತಿಕ ತೇಜೋವಧೆಗೆ ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
Advertisement