ಈಗಾಗಲೇ ಹಾಡುಗಳಿಂದ ನಿರೀಕ್ಷೆ ಹುಟ್ಟಿಸಿರುವ ಎ.ಪಿ.ಅರ್ಜುನ್ ನಿರ್ದೇಶನದ ಮೂರನೇ ಚಿತ್ರ 'ರಾಟೆ'ಯ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಇದೇ ಮಾರ್ಚ್ ಇಪ್ಪತ್ತಕ್ಕೆ ರಾಟೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ರಾಟೆಯ ಮೂಲಕ ಅರ್ಜುನ್ಗೆ ಹ್ಯಾಟ್ರಿಕ್ ಬಾರಿಸುವ ಮಹತ್ವಾಕಾಂಕ್ಷೆ. ಮೇಕಿಂಗ್ಗೆ ಒಂದು ವರ್ಷ ತೆಗೆದುಕೊಂಡಿರುವ ರಾಟೆ ಚಿತ್ರ ಸುಮಾರು ಮೂರು ತಿಂಗಳ ಹಿಂದೆಯೇ ಸಿನಿಮಾ ತಯಾರಾಗಿದ್ದರೂ ಒಂದಲ್ಲಾ ಒಂದು ಕಾರಣಕ್ಕೆ ಪ್ರೇಕ್ಷಕರನ್ನು ಕಾಯಿಸಿ ಖುಷಿ ಪಡುತ್ತಿತ್ತು. ಇದೀಗ ವಿಶ್ವಕಪ್ ಮುಗಿಯುವ ಹೊತ್ತಿಗೆ ಬರಲು ಸಜ್ಜಾಗಿದ್ದಾರೆ ಅರ್ಜುನ್ ಆ್ಯಂಡ್ ಟೀಂ.
ರಾಟೆ ಚಿತ್ರದ ಮೂಲಕ ಧನಂಜಯ್ ಪರ್ವ ಆರಂಭವಾಗಲಿದೆ ಅಂದರೆ ಅದು ಉತ್ಪ್ರೇಕ್ಷಯಲ್ಲ. ಈ ವರ್ಷದಲ್ಲಿ ಕಮ್ಮಿಯೆಂದರೂ ಅವರ ನಾಲ್ಕು ಚಿತ್ರಗಳು ಬರಲಿವೆ. ರಾಟೆ ಬಿಡುಗಡೆಯ ನಂತರದಲ್ಲಿ ಪ್ರೀತಂ ಗುಬ್ಬಿ ನಿರ್ದೇಶನದ ಬಾಕ್ಸರ್ ತೆರೆಕಾಣಲಿದೆ. ಅದರ ಬೆನ್ನಲ್ಲೇ ಈಗ ಗ್ರಾಫಿಕ್ಸ್ ಕೆಲಸದಲ್ಲಿ ತೊಡಗಿಕೊಂಡಿರುವ ವಿಜಯಾದಿತ್ಯ ಬರಲಿದೆ. ಆ ನಂತರ ಗುರುಪ್ರಸಾದ್ ನಿರ್ದೇಶನದ ಎರಡನೇ ಸಲ ಚಿತ್ರ. ಸ್ಕ್ರಿಪ್ಟ್ ಕೆಲಸ ಭರದಿಂದ ಸಾಗುತ್ತಿರುವ ಎರಡನೇ ಸಲ ಚಿತ್ರ ದಸರೆ ಹೊತ್ತಿಗೆ ಪ್ರೇಕ್ಷಕರೆದುರು ಪ್ರತ್ಯಕ್ಷ ಆಗೋದು ಗ್ಯಾರಂಟಿ ಎಂದು ಗುರು ಪ್ರಸಾದ್ ಹೇಳಿದ್ದಾರಂತೆ.
ರಾಟೆ ವಿಷಯಕ್ಕೆ ಬರೋದಾದ್ರೆ ಹರಿಕೃಷ್ಣ ಸಂಗೀತದ ಅರ್ಜುನ್ ಸಾಹಿತ್ಯದ ಹಾಡುಗಳು ಈಗಾಗಲೇ ಮೋಡಿ ಮಾಡಿವೆ. ಸತ್ಯ ಹೆಗಡೆ ಕ್ಯಾಮೆರಾ ಕೈಚಳಕದಲ್ಲಿ ಹೊರಾಂಗಣ ದೃಶ್ಯಗಳು ದುನಿಯಾ, ಅಟ್ಟಹಾಸ, ಮೈನಾ ಚಿತ್ರಗಳನ್ನು ನೆನಪಿಸುವಂತೆ ಮಾಡುತ್ತಿವೆ. ಶ್ರುತಿ ಹರಿಹರನ್ ಮತ್ತು ಧನಂಜಯ್ ಜೋಡಿಯನ್ನು ಜನ ಹಾಡಿನ ಚಿತ್ರಣದಲ್ಲಿ ಇಷ್ಟಪಟ್ಟಿದ್ದಾರೆ.
ಟ್ರೇಲರ್ ನೋಡಿ ಜನ ದುನಿಯಾ ಚಿತ್ರವನ್ನು ನೆನಪಿಸಿಕೊಳ್ಳುತ್ತಿರುವುದರ ಜತೆಗೆ ಟ್ರಾಜಿಡಿ ಇರಬಹುದಾ ಅಂತಲೂ ಮಾತನಾಡಿಕೊಳ್ಳುತ್ತಿದ್ದಾರೆ. ಬ್ಲ್ಯಾಕ್ ಮ್ಯಾಜಿಕ್ ಕುರಿತ ಚಿತ್ರ ಎಂಬ ಸುಳಿವು ಬಿಟ್ಟರೆ, ಚಿತ್ರದ ಬಗ್ಗೆ ಇನ್ಯಾವ ಮಾಹಿತಿಯನ್ನೂ ತಂಡ ಬಿಟ್ಟುಕೊಡದೇ ತೆರೆಯ ಮೇಲೆ ನೋಡಿ ಅಂತಿದೆ. ಮಾರ್ಚ್ ಇಪ್ಪತ್ತರ ತನಕ ಕಾಯದೇ ವಿಧಿಯಿಲ್ಲ. ಅದೇ ಹೊತ್ತಿಗೆ ವಾಸ್ತು ಪ್ರಕಾರ, ರಣವಿಕ್ರಮ ಕೂಡ ತೆರೆಕಾಣಲಿವೆ ಎಂಬ ಸುದ್ದಿ ಇರೋದ್ರಿಂದ, ಒಳ್ಳೆ ಚಿತ್ರಗಳ ನಡುವೆ ಸ್ಪರ್ಧೆ ಶುರುವಾಗುವ ನಿರೀಕ್ಷೆಯನ್ನಂತೂ ಇಟ್ಟುಕೊಳ್ಳಬಹುದು.
Advertisement