ಬೆಂಗಳೂರು: ಕನ್ನಡದ ಖ್ಯಾತ ಲೇಖಕ ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆ 'ಕಿರಗೂರಿನ ಗಯ್ಯಾಳಿಗಳು' ಆಧಾರಿತ ಸಿನೆಮಾ ಮಾಡಲು ನಿರ್ದೇಶಕಿ ಸುಮನಾ ಕಿತ್ತೂರು ಭರದ ಸಿದ್ಧತೆ ನಡೆಸಿದ್ದಾರೆ. ಪಾತ್ರವರ್ಗದ ಶೋಧನೆಯಲ್ಲಿರುವ ಸುಮನಾ ರಂಗಭೂಮಿ ನಟರ ಆಡಿಶನ್ ನಲ್ಲಿ ನಿರತರಾಗಿದ್ದಾರೆ.
"ಇದು ಗಂಭೀರವಾದ ಕಥೆ ಆಗಿರುವುದರಿಂದ ಹಾಗು ಇದನ್ನು ಸಾಕಷ್ಟು ಜನ ಓದಿರುವುದರಿಂದ ಪಾತ್ರ ವರ್ಗದ ಆಯ್ಕೆ ಅತಿ ಮುಖ್ಯ. ದಾನಮ್ಮನ ಪಾತ್ರ ಮಾಡಲು ಈಗಾಗಲೇ ಶ್ವೇತಾ ಶ್ರೀವಾತ್ಸವ್ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಸುತ್ತ ಉಳಿದ ಪೋಷಕ ಪಾತ್ರವರ್ಗವನ್ನು ಕಟ್ಟಬೇಕಿದೆ" ಎನ್ನುತ್ತಾರೆ ನಿರ್ದೇಶಕಿ.
"ಕಿರಗೂರಿನ ಗಯ್ಯಾಳಿಗಳು ಕಥೆಯನ್ನು ಸಿನೆಮಾ ಮಾಡಬೇಕು ಎಂದುಕೊಡಾಕ್ಷಣ ನನ್ನ ಮನಸ್ಸಿನಲ್ಲಿದ್ದು ಶ್ವೇತಾ. ಅವರು ಹೆಚ್ಚು ಸಿನೆಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಆದುದರಿಂದ ಈ ಪಾತ್ರದಲ್ಲಿ ಅವರು ತಾಜಾವಾಗಿ ಕಾಣುತ್ತಾರೆ. ನಾನು ಅವರನ್ನು ತಲುಪಿದಾಗ ಅವರು ಕೇಳಿದ್ದು ನನಗೆ ದಾನಮ್ಮನ ಪಾತ್ರ ಕೊಡುತ್ತೀರಾ ಎಂದು" ಎನ್ನುತ್ತಾರೆ ಸುಮನಾ.
ಯೋಗೇಶ್ ಕೂಡ ಒಂದು ಪಾತ್ರ ನಿರ್ವಹಿಸಲಿದ್ದು, ಸ್ಕ್ರಿಪ್ಟ್ ಮತ್ತು ಸಂಭಾಷಣೆಯ ಸಹಾಯಕ್ಕಾಗಿ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಅವರ ಸಹಾಯ ಕೋರಿದ್ದೇನೆ ಎನ್ನುತ್ತಾರೆ ಸುಮನಾ.
ಮನೋಹರ್ ಜೋಷಿ ಕ್ಯಾಮರಾ ಮ್ಯಾನ್ ಆಗಿ ಆಯ್ಕೆಯಾಗಿದ್ದು, ಸಂಗೀತಕಾರ ಪೂರ್ಣಚಂದ್ರ ತೇಜಸ್ವಿ ಹಾಡುಗಳನ್ನು ಕಂಪೋಸ್ ಮಾಡಲಿದ್ದಾರೆ. ಹಡಪ್ಪ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
Advertisement