ಜನಸಮೂಹ ನಿಧಿ ಸಂಗ್ರಹದಿಂದ ವಿತರಣೆ: ‘ಬೇರ್ಫುಟ್ ಟು ಗೋವಾ’

ಹಿಂದಿ ಚಲನಚಿತ್ರ ‘ಬೇರ್ಫುಟ್ ಟು ಗೋವಾ’ ದೇಶದಾದ್ಯಂತ ಬಿಡುಗಡೆಗೆ ಸಿದ್ಧವಾಗಿದ್ದು, ಬೆಂಗಳೂರಿನ ಸಿನಿಮಾ ಮಂದಿರಗಳಲ್ಲಿ ಏಪ್ರಿಲ್ 10 ರಂದು ತೆರೆ ಕಾಣಲಿದೆ.
ಬೇರ್ಫುಟ್ ಟು ಗೋವಾ ಸಿನೆಮಾ ಸ್ಟಿಲ್
ಬೇರ್ಫುಟ್ ಟು ಗೋವಾ ಸಿನೆಮಾ ಸ್ಟಿಲ್

ಬೆಂಗಳೂರು: ಹಿಂದಿ ಚಲನಚಿತ್ರ ‘ಬೇರ್ಫುಟ್ ಟು ಗೋವಾ’ ದೇಶದಾದ್ಯಂತ ಬಿಡುಗಡೆಗೆ ಸಿದ್ಧವಾಗಿದ್ದು, ಬೆಂಗಳೂರಿನ ಸಿನಿಮಾ ಮಂದಿರಗಳಲ್ಲಿ ಏಪ್ರಿಲ್ 10 ರಂದು ತೆರೆ ಕಾಣಲಿದೆ. ಈ ಚಿತ್ರವು ಹಿಂದಿ ಚಲನಚಿತ್ರ ರಂಗದ ಇತಿಹಾಸದ ಪುಟಗಳಲ್ಲಿ ತನ್ನದೇ ಆದ ವಿಶಿಷ್ಟ ದಾಖಲೆ ಬರೆಯಲಿದೆ. ಅತ್ಯುತ್ಕೃಷ್ಟ ಚಿತ್ರ ಕಥಾ ಹಂದರ ಹೆಣೆದ ಕಾರಣಕ್ಕಷ್ಟೇ ಅಲ್ಲದೇ, ಇದೇ ಮೊದಲ ಬಾರಿಗೆ ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಿಂದಲೇ ಈ ಚಿತ್ರವನ್ನು ವಿತರಣೆ ಮಾಡುತ್ತಿರುವುದು ಈ ಚಿತ್ರದ ಇನ್ನೊಂದು ಹೆಗ್ಗಳಿಕೆಯಾಗಿದೆ. 45 ದಿನಗಳಲ್ಲಿ 50 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಚಲನಚಿತ್ರ ಬಿಡುಗಡೆ ಮಾಡುತ್ತಿರುವುದು ಹಿಂದಿ ಚಿತ್ರೋದ್ಯಮದಲ್ಲಿಯೇ ಹೊಸ ಪ್ರಯೋಗವಾಗಿದೆ.  ಬೆಂಗಳೂರಿನ ಹಲವಾರು ಚಿತ್ರ ಪ್ರೇಮಿಗಳೂ ಈ ಚಿತ್ರದ ಬಿಡುಗಡೆಗೆ ಅಭಿಮಾನದಿಂದಲೇ ಹಣ ನೀಡಿದ್ದಾರೆ.`ಚಲನಚಿತ್ರವೊಂದರ ಬಿಡುಗಡೆಗೆ ಚಿತ್ರಪ್ರೇಮಿಗಳಿಂದಲೇ ಹಣ ಸಂಗ್ರಹಿಸುವ ವಿದ್ಯಮಾನವು ಚಿತ್ರೋದ್ಯಮದಲ್ಲಿ ದಿನೇ ದಿನೇ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ.

ಚಿತ್ರದ ಬಿಡುಗಡೆಯಲ್ಲಿ ಸಾರ್ವಜನಿಕರು ಸ್ವಇಚ್ಛೆಯಿಂದ ಪಾಲ್ಗೊಳ್ಳುವುದು ಮತ್ತು ತಮ್ಮ ನಗರಗಳ ಚಿತ್ರ ಮಂದಿರಗಳಲ್ಲಿನ ಅದರ ಬಿಡುಗಡೆಯ ಭಾಗವಾಗುವುದಕ್ಕೆ   ‘ಬೇರ್ಫುಟ್ ಟು ಗೋವಾ’ ಚಲನಚಿತ್ರವು ಭಾರತದ ಚಿತ್ರೋದ್ಯಮದಲ್ಲಿ ಹೊಸ ಅಲೆ ಸೃಷ್ಟಿಸಲಿರುವ ಬಗ್ಗೆ ನನಗೆ ಯಾವುದೇ ಅನುಮಾನಗಳು ಇಲ್ಲ' ಎಂದು ಐಐಎಂ ಬೆಂಗಳೂರಿನ ಪಿಎಚ್.ಡಿ ವಿದ್ಯಾರ್ಥಿ ದೇಣಿಗ ಸೆಲ್ವರಾಜ್ನ್ ರಾಜೇಶ್ವರನ್ ಅಭಿಪ್ರಾಯಪಡುತ್ತಾರೆ.

ಅತ್ಯಂತ ಕಡಿಮೆ ಬಜೆಟ್ನಲ್ಲಿ ತಯಾರಾಗಿರುವ ಈ ಚಿತ್ರವು ಖಂಡಿತವಾಗಿಯೂ  ವಿಶ್ವದಾದ್ಯಂತ ಚಲನಚಿತ್ರ ಪ್ರೇಮಿಗಳ ಮನ ಗೆಲ್ಲಲಿದೆ ಎಂದು ಬಹುವಾಗಿ ನಿರೀಕ್ಷಿಸಲಾಗಿದೆ. ವಿಶ್ವದಾದ್ಯಂತ ಇರುವ 15 ದೇಶಗಳಲ್ಲಿನ 240 ಮಂದಿ ಸಿನಿಮಾ ಪ್ರೇಮಿಗಳು ಈ ಚಿತ್ರವು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗುವುದನ್ನು ಸಾಧ್ಯ ಮಾಡಲು ಹಣಕಾಸಿನ ನೆರವು ನೀಡಿದ್ದಾರೆ. `ಚಿತ್ರದ ಪರಿಕಲ್ಪನೆಯು ನನಗೆ ತುಂಬ ಇಷ್ಟವಾಗಿದ್ದು, ನಮ್ಮ ಬೆಂಗಳೂರು ನಗರದಲ್ಲಿನ ಚಲನಚಿತ್ರ ಪ್ರೇಮಿಗಳಿಗೆ ಇದನ್ನು ತಲುಪಿಸುವ ಉದ್ದೇಶದಿಂದ ನಾನು ಈ ಚಿತ್ರಕ್ಕೆ ಹಣಕಾಸಿನ ಬೆಂಬಲ ನೀಡಿದ್ದೇನೆ' ಎಂದು ಯುನಿಲೀವರ್ ನಲ್ಲಿ ಪ್ರೊಕ್ಯುರ್ ಮೆಂಟ್ ಮ್ಯಾನೇಜರ್ ಆಗಿರುವ ಶ್ರೀಕಿರಣ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

`ಬೇರ್ ಫೂಟ್ ಟು ಗೋವಾ', ಚಿಂತನೆಗೆ ಹಚ್ಚುವ ಹೃದಯಸ್ಪರ್ಶಿಯಾದ ಸುಂದರ ಚಲನಚಿತ್ರವಾಗಿದೆ. ಈ ಚಿತ್ರವು ವೀಕ್ಷಕರಲ್ಲಿ ತಾಜಾತನದ ಪ್ರಜ್ಞೆ ಮೂಡಿಸಲಿದ್ದು, ಮಾನವೀಯ ಮೌಲ್ಯಗಳು ಮತ್ತು ಸಂಬಂಧಗಳ ಸೂಕ್ಷ್ಮತೆಗಳ ಬಗ್ಗೆ ವೀಕ್ಷಕರನ್ನು ಹೊಸ ಲೋಕಕ್ಕೆ ಕರೆದೊಯ್ಯಲಿದೆ. ಮುಗ್ಧತೆಯನ್ನು ನಿರ್ಲಕ್ಷಿಸುವ ಪ್ರವೃತ್ತಿಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ಅರಾಜಕತೆಯಲ್ಲಿ ನೆಮ್ಮದಿ ತರುವ ಚಿತ್ರವೂ ಇದಾಗಿದೆ.
 
`ಈಗಾಗಲೇ ಹಲವಾರು ಚಿತ್ರೋತ್ಸವಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿರುವ `ಬೇರ್ ಫೂಟ್ ಟು ಗೋವಾ', ಚಿತ್ರವನ್ನು ದೇಶದಾದ್ಯಂತ ಬಿಡುಗಡೆ ಮಾಡಲು ನಾವು ತುಂಬ ಉತ್ಸುಕರಾಗಿದ್ದೇವೆ. ಈ ಕನಸಿನ ಯೋಜನೆಯ ವಾಣಿಜ್ಯ ಉದ್ದೇಶದ ಬಿಡುಗಡೆಯು ನಮ್ಮ ಹೆಮ್ಮೆಯ ದಾನಿಗಳು ಮತ್ತು ಬೆಂಬಲಿಗರ ನೆರವಿನಿಂದ ಸಾಧ್ಯವಾಗಿದೆ' ಎಂದು ಚಿತ್ರದ ನಿರ್ದೇಶಕ ಪ್ರವೀಣ್ ಮೊರ್ಚಾಲೆ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com