ಚೆನ್ನೈ: ನಿರ್ಮಾಪಕರು ಹಾಗೂ ಫೈನಾನ್ಶಿಯರ್ ನಡುವಿನ ವಿವಾದ ಅಂತ್ಯವಾಗಿದ್ದು, ನಟ ಕಮಲ್ ಹಾಸನ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಉತ್ತಮ ವಿಲನ್' ಇಂದು ದೇಶಾದ್ಯಂತ ತೆರೆ ಕಾಣುತ್ತಿದೆ.
ಪ್ರತಿಭಾನ್ವಿತ ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ ಉತ್ತಮ ವಿಲನ್ ಚಿತ್ರ ನಿನ್ನೆ ದೇಶಾದ್ಯಂತ ತೆರೆಕಾಣಬೇಕಿತ್ತು. ಆದರೆ ಚಿತ್ರ ನಿರ್ಮಾಪಕರು ಮತ್ತು ಫೈನಾನ್ಶಿಯರ್ ನಡುವಿನ ಆರ್ಥಿಕ ಸಮಸ್ಯೆಯಿಂದಾಗಿ ಮೊದಲ ದಿನದ ಶೋ ರದ್ದುಗೊಂಡಿತ್ತು.
ನಿರ್ಮಾಪಕರು ಮತ್ತು ಫೈನಾನ್ಶಿಯರ್ ನಡುವೆ ಭುಗಿಲೆದ್ದಿದ್ದ ವಿವಾದ ಇಂದು ಅಂತ್ಯವಾಗಿದ್ದು, ಚೆನ್ನೈನಲ್ಲಿ ಮಧ್ಯಾಹ್ನ 12 ಗಂಟೆಗೆ ಮೊದಲ ಶೋ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನದ ನಂತರ ಕರ್ನಾಟಕ ಸೇರಿದಂತೆ ದೇಶ, ವಿದೇಶಗಳಲ್ಲಿ ಚಿತ್ರ ತೆರೆ ಕಾಣಲಿದೆ.
ಉತ್ತಮ ವಿಲನ್ ಚಿತ್ರ ವೀಕ್ಷಣೆಗಾಗಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸಾವಿರಾರು ಅಭಿಮಾನಿಗಳು ಟಿಕೆಟ್ ಬುಕ್ ಮಾಡಿದ್ದರು. ಆದರೆ ಚಿತ್ರ ಪ್ರದರ್ಶನ ರದ್ದುಗೊಂಡಿದ್ದರಿಂದ ಚಿತ್ರಮಂದಿರದ ಬಳಿ ನೆರೆದಿರುವ ಸಾವಿರಾರು ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದರು.
Advertisement