ರಿಕ್ಕಿ ಸಿನೆಮಾಗೋಸ್ಕರ ಇತರ ಸಿನೆಮಾ ಪ್ರಚಾರ ಕಾರ್ಯಕ್ರಮಗಳಿಗೆ ಹರಿಪ್ರಿಯಾ ಗೈರು
ಬೆಂಗಳೂರು: ತಮ್ಮ ಮುಂದಿನ ಸಿನೆಮಾ 'ರಿಕ್ಕಿ' ಚಿತ್ರದ ಹಾಡೊಂದರ ಚಿತ್ರೀಕರಣಕ್ಕೆ ಕಾಶ್ಮೀರದಲ್ಲಿರುವ ನಟಿ ಹರಿಪ್ರಿಯಾ, ತಮ್ಮ ಇತರ ಚಿತ್ರಗಳಾದ 'ರನ್ನ' ಪತ್ರಿಕಾ ಗೋಷ್ಠಿ, 'ಬುಲೆಟ್ ಬಸ್ಯಾ' ಆಡಿಯೋ ಬಿಡುಗಡೆ ಕಾರ್ಯಕ್ರಮಗಳಿಗೆ ಬರಲು ಸಾಧ್ಯವಾಗಿಲ್ಲ. ಈ ಕಾರ್ಯಕ್ರಮಗಳನ್ನು ಇದ್ದಕ್ಕಿದ್ದಂತೆ ಆಯೋಜಿಸಲಾಗಿದ್ದರಿಂದ, ಕಾಶ್ಮೀರದಲ್ಲಿ ಚಿತ್ರೀಕರಣ ಮುಗಿಸಲಾಗದೆ ಬರಲು ಸಾಧ್ಯವಿರಲಿಲ್ಲ ಎಂದಿದ್ದಾರೆ.
"ನಾನು ಎರಡು ಸಿನೆಮಾಗಳಲ್ಲೂ ಒಳ್ಳೆಯ ನಟನೆ ನೀಡಿದ್ದೇನೆ. ಥಿಯೇಟರ್ ಗಳಲ್ಲಿ ಸಿನೆಮಾ ಬಿಡುಗಡೆಯಾದ ನಂತರ ಫಲಿತಾಂಶ ತಿಳಿಯುತ್ತದೆ. ಆದರೆ ಈ ಪ್ರಚಾರ ಕಾರ್ಯಕ್ರಮಗಳಲ್ಲಿ ಇರಲಾಗಲಿಲ್ಲ" ಎಂದು ಹರಿಪ್ರಿಯಾ ಹೇಳಿದ್ದಾರೆ.
'ಅತ್ತಾರಿಂಟಿಕಿ ದಾರೇಧಿ' ತೆಲುಗು ಚಿತ್ರದ ರಿಮೇಕ್ 'ರನ್ನ' ಸಿನೆಮಾದಲ್ಲಿ ಶಾಸ್ತ್ರೀಯ ನೃತ್ಯಗಾರ್ತಿಯಾಗಿ ನಟಿಸಿರುವ ಹರಿಪ್ರಿಯಾ ಈ ಸಿನೆಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನೆಮಾ ಸುದೀಪ್ ಮತ್ತು ಮಧು ಸುತ್ತ ಸುತ್ತುತ್ತದೆ. ಆದರೂ ತಮಗೆ ಪ್ರಮುಖ ಪಾತ್ರವಿದೆ ಎನ್ನುತ್ತಾರೆ ನಟಿ.
"ಇದು ಕೌಟುಂಬಿಕ ಚಿತ್ರ. ಎಲ್ಲ ಪಾತ್ರಗಳು ಛಾಪು ಮೂಡಿಸುತ್ತವೆ. ನನ್ನ ಪಾತ್ರ ಪ್ರಮುಖ ಏಕೆಂದರೆ ಅದಕ್ಕೆ ಇತರ ಪಾತ್ರಗಳೊಡನೆ ಸಂಬಂಧ ಇರುತ್ತದೆ" ಎನ್ನುತ್ತಾರೆ.
ಬುಲೆಟ್ ಬಸ್ಯಾ ಸಿನೆಮಾದಲ್ಲಿ ಶರಣ್ ಅವರೊಂದಿಗೆ ಹರಿಪ್ರಿಯಾ ನಟಿಸುತ್ತಿದ್ದಾರೆ ಹಾಗು 'ರಣತಂತ್ರ' ಸಿನೆಮಾದಲ್ಲೂ ಕೂಡಾ ನಟಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ