ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮ ವೀಕ್ಷಕರಿಗೆ ಈ ವಾರಾಂತ್ಯ ಡಬಲ್ ಧಮಾಕ. ತೂಗೂದೀಪ್ ಪ್ರೊಡಕ್ಷನ್ ನಿರ್ಮಾಣದ, ಕವಿರಾಜ್ ಚೊಚ್ಚಲ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಸಿನೆಮಾದ ಬಿಗ್ ಬಾಸ್ ಮನೆಯಲ್ಲಿ ಬಿಡುಗಡೆಯಾಗಲಿದೆ. "ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ನಲ್ಲಿ ನಮ್ಮ ಸಿನೆಮಾ ಚಾಲನೆಯಾಗಿತ್ತು. ಈಗ ಬಿಗ್ ಬಾಸ್ ಮನೆಯಲ್ಲಿ ಇದೇ ಮೊದಲ ಬಾರಿಗೆ ಆಡಿಯೋ ಬಿಡುಗಡೆ ನಡೆಯುತ್ತಿದೆ. ಇದು ಸುದೀಪ್ ಅವರ ಐಡಿಯಾ ಮತ್ತು ಆಡಿಯೋ ಬಿಡುಗಡೆಗೆ ಇದು ಒಳ್ಳೆಯ ವೇದಿಕೆ ಆದುದರಿಂದ ಒಪ್ಪಿಕೊಂಡೆವು ಎನ್ನುತ್ತಾರೆ ನಿರ್ಮಾಪಕ ದಿನಕರ್ ತೂಗುದೀಪ್.
ಈ ಒಂದು ಘಂಟೆಯ ಕಾರ್ಯಕ್ರಮದಲ್ಲಿ ಹಾಡುಗಳ ಕೆಲವು ದೃಶ್ಯಗಳನ್ನು ಬಿತ್ತರಿಸಲಾಗುವುದು ಹಾಗೆಯೇ ನಾಯಕ ಸೂರಜ್ ಗೌಡ ಮತ್ತು ಅಮೂಲ್ಯ ಅವರ ನೃತ್ಯ ಕಾರ್ಯಕ್ರಮ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಕಾರ್ಯಕ್ರಮ ಕೂಡ ಇರುತ್ತದೆ. ಕಾರ್ಯಕ್ರಮದಲ್ಲಿ ಅನಂತ್ ನಾಗ್ ಕೂಡ ಭಾಗವಹಿಸಲಿದ್ದಾರಂತೆ. "ಸೋಮವಾರದಿಂದ ಹಾಡುಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ" ಎನ್ನುತ್ತಾರೆ ದಿನಕರ್.
ಗೀತರಚನಕಾರರಿಂದ ನಿರ್ದೇಶಕನಾಗಿ ಭಡ್ತಿ ಪಡೆದಿರುವ ಕವಿರಾಜ್ ಚೊಚ್ಚಲ ಬಾರಿಗೆ ತಮ್ಮ ನಿರ್ದೇಶನ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಿದ್ದಾರೆ. ಸೂರಜ್ ಗೌಡ, ಅಮೂಲ್ಯ ಅನಂತನಾಗ್ ಇವರುಗಳಲ್ಲದೆ ಅಚ್ಯುತ್ ಕುಮಾರ್, ಚಿತ್ರ ಶೆಣಾಯ್, ಸಂಗೀತಾ, ಶಾಲಿನಿ ಕೂಡ ನಟಿಸಿದ್ದಾರೆ. ಹೊಸ ವರ್ಷಕ್ಕೆ ಸಿನೆಮಾ ಬಿಡುಗಡೆ ಮಾಡಲು ಎದುರು ನೋಡುತ್ತಿದ್ದೇವೆ ಎನ್ನುತ್ತಾರೆ ದಿನಕರ್.
Advertisement