ಬೆಂಗಳೂರು: ಎ ಪಿ ಅರ್ಜುನ್ ನಿರ್ದೇಶನದ, ಜನಪ್ರಿಯ ನಟ ದರ್ಶನ್ ಅಭಿನಯದ 'ಐರಾವತ' ನಿರ್ಮಾಪಕರಿಗೆ ಬಿಳಿ ಆನೆಯಂತೆಯೇ ಆಗಿತ್ತು. ಹಲವಾರು ಅಡಚಣೆಗಳು, ಇನ್ನಿತ್ಯಾದಿ ತೊಂದರೆಗಳಿಂದ ಕೊನೆಗೂ ಸಿನೆಮಾ ಮುಗಿದಿದ್ದು, ಈಗ ಬಿಳಿ ಆನೆ ನಿರ್ಮಾಪಕರಿಗೆ ಆಗಲೇ ಲಾಭ ತಂದುಕೊಟ್ಟಿದೆಯಂತೆ!
ಗೋಕುಲ್ ಫಿಲ್ಮ್ಸ್ ಬೆಂಗಳೂರು, ಕೋಲಾರ ಮತ್ತು ತುಮಕೂರ ಭಾಗಗಳ ವಿತರಣಾ ಹಕ್ಕುಗಳನ್ನು, ಎನ್ ಕುಮಾರ್ ಮೈಸೂರು, ಕುಮಾರ್ ಶೆಟ್ರು ಹುಬ್ಬಳ್ಳಿ ಮತ್ತು ಶಾಸ್ತ್ರಿ ಚಿತ್ರದುರ್ಗದ ವಿತರಣಾ ಹಕ್ಕುಗಳನ್ನು ಕೊಂಡುಕೊಡಿದ್ದಾರಂತೆ. ೨೫ ಕೋಟಿ ವಚ್ಚದಲ್ಲಿ ಈ ಸಿನೆಮಾ ನಿರ್ಮಿಸಿರುವ ಸಂದೇಶ್ ನಾಗರಾಜ್ ಅವರಿಗೆ ವಿತರಣೆಯಿಂದ ತಮ್ಮ ಹೂಡಿಗೆ ವಾಪಸ್ ಬಂದಿದೆಯಂತೆ. "ಟಿವಿ ಹಕ್ಕುಗಳನ್ನು ಹೊರತುಪಡಿಸಿ ನಮ್ಮ ಹೂಡಿಗೆ ನಮಗೆ ವಾಪಸ್ ಬಂದಿದೆ. ಸಟ್ಟಲೈಟ್ ಹಕ್ಕುಗಳಿಗೆ ನಮಗೆ ದೊಡ್ಡ ಮೊತ್ತದ ಆಫರ್ ಬಂದಿದೆ. ಆದರೆ ನಾವಿನ್ನೂ ಅದನ್ನು ಮಾರಾಟ ಮಾಡಿಲ್ಲ. ಅದು ನಮ್ಮ ಲಾಭಕ್ಕೆ ಕೂಡಿಕೆಯಾಗುತ್ತದೆ" ಎನ್ನುತ್ತಾರೆ ನಿರ್ಮಾಪಕ.
ದರ್ಶನ್ ಅವರ ಹಿಂದಿನ ಸಿನೆಮಾ 'ಅಂಬರೀಶ' ರಾಜ್ಯಾದ್ಯಂತ ವಿತರಣೆಗೆ ೧೭ ಕೋಟಿಗೆ ದಾಖಲೆ ಮಾರಾಟ ಕಂಡಿತ್ತು. ಈಗ ಅವರ ಐರಾವತ ಈ ದಾಖಲೆಯನ್ನು ಮುರಿದಿದೆ.
ಮೊದಲಿನ ಯೋಜನೆಯಂತೆ ಈ ಸಿನೆಮಾವನ್ನು ೧೪ ಕೋಟಿ ವೆಚ್ಚದಲ್ಲಿ ೧೦೦ ದಿನಗಳ ಚಿತ್ರೀಕರಣದೊಂದಿಗೆ ಸಂಪೂರ್ಣಗೊಳಿಸುವ ಯೋಜನೆಯಿತ್ತಂತೆ. ಆದರೆ ಇದು ೧೫೦ ದಿನದ ಚಿತ್ರೀಕರಣ ಮತ್ತು ೨೫ ಕೋಟಿ ವೆಚ್ಚಕ್ಕೆ ಬೆಳೆಯಿತಂತೆ. ಸದ್ಯಕ್ಕೆ ಚಿತ್ರೀಕರಣ ನಂತರದ ಕೆಲಸಗಳಲ್ಲಿ ಚಿತ್ರತಂಡ ನಿರತವಾಗಿದ್ದು, ಸೆಪ್ಟಂಬರ್ ಕೊನೆ ಅಥವಾ ಅಕ್ಟೋಬರ್ ಮೊದಲ ವಾರಕ್ಕೆ ಸಿನೆಮಾ ಬಿಡುಗಡೆಯಾಗಲಿದೆಯಂತೆ. "ನಾವು ಬಕ್ರೀದ್ ಅಥವಾ ಗಾಂಧಿ ಜಯಂತಿಗೆ ಸಿನೆಮಾ ಬಿಡುಗಡೆ ಮಾಡಬೇಕೆಂದಿದ್ದೇವೆ" ಎನ್ನುತ್ತಾರೆ ಸಂದೇಶ್.
Advertisement