ಇದು ಈ ಚಿತ್ರದ ಒಂದು ಚಿಕ್ಕ ಉದಾಹರಣೆ. ಈ ರೀತಿಯ ತಿರುವುಗಳನ್ನು ಚಿತ್ರೀಕರಣದ ಪೂರ ಅನುಭವಿಸಿರುವ ನಿರ್ದೇಶಕ ಸತ್ಯಪ್ರಕಾಶ್ ತಮ್ಮ ಇಡೀ ತಂಡವನ್ನು ಮನಸಾರೆ ಜ್ಞಾಪಿಸಿಕೊಳ್ಳುತ್ತಾರೆ. ತಂಡದಲ್ಲಿ ಒಬ್ಬ ಆಗುವುದಿಲ್ಲ ಎಂದು ಕೂತಿದ್ದರೂ ಸಿನಿಮಾ ಮುಗಿಸಿಕೊಂಡು ಬರುವುದು ಬಹಳ ಕಷ್ಟವಾಗುತ್ತಿತ್ತು. ಪ್ರತಿಯೊಬ್ಬರೂ ಹಟಕ್ಕೆ ಬಿದ್ದಂತೆ ಜೊತೆ ಜೊತೆಗೆ ದುಡಿದು ಚಿತ್ರವನ್ನು ಪೂರೈಸಿಕೊಟ್ಟಿದ್ದಾರೆ ಎನ್ನುವುದು ಸತ್ಯ ಅವರ ಮನದ ಮಾತು. ಚಿತ್ರದ ಮುಖ್ಯ ಪಾತ್ರಾದಿಗಳಾದ ಕೆ. ಜಯರಾಮ್, ನಟರಾಜ್, ಧರ್ಮಣ್ಣ, ಬಿಂಬಶ್ರೀ ನೀನಾಸಂ, ಎಮ್.ಕೆ ಮಠ, ರಾಧಾ ರಾಮಚಂದ್ರ, ಶ್ರೀಧರ್ ಎಲ್ಲರೂ ನಾಟಕ ರಂಗದ ಹಿನ್ನಲೆ ಉಳ್ಳವರು. ಎಲ್ಲರೂ ತುಂಬಾ ಸಹಜವಾಗಿ ಅಭಿನಯಿಸಿದ್ದಾರೆ. ಚಿತ್ರೀಕರಣ ನಡೆದ ಸ್ಥಳದಲ್ಲಿ ಒಂದೇ ಒಂದು ಮನೆಯಾಗಲಿ, ಜನರಾಗಲಿ ಯಾರೂ ಇರಲಿಲ್ಲ. ಒಂದು ಲೋಟ ನೀರು ಬೇಕೆಂದರು ಸುಮಾರು ಕಿ.ಮೀಗಳಷ್ಟು ದೂರ ಪ್ರಯಾಣಿಸಬೇಕಿತ್ತು. ಆದ್ದರಿಂದ ನೀರಿನಿಂದ ಹಿಡಿದು ಊಟದ ತನಕ ಬಿಜಾಪುರದಿಂದಲೇ ತರಿಸಬೇಕಿತ್ತು. ಅದಕ್ಕಾಗಿ ಒಂದು ಗಾಡಿ ದಿನಕ್ಕೆ ಮೂರು ಬಾರಿ ಬಿಜಾಪುರ ಹಾಗು ಲೊಕೇಶನ್ನಿಗೆ ಓಡಾಡುತ್ತಿತ್ತು. ಚಿತ್ರದಲ್ಲಿ ಹಿರಿಯ ಮತ್ತು ಕಿರಿಯ ತಂತ್ರಜ್ಞರು ಸೇರಿ ಕೆಲಸ ನಿರ್ವಹಿಸಿದ್ದಾರೆ. ಚಿತ್ರಕಥೆ ಸಹಾಯ ಮತ್ತು ಸಂಭಾಷಣೆಯನ್ನು ಹಿರಿಯ ಸಾಹಿತಿ ಬಿ.ಸಿದ್ದಗಂಗಯ್ಯ ಕಂಬಾಳು (ನಿಸರ್ಗಪ್ರಿಯ), ಸಂಕಲನವನ್ನು ಹಿರಿಯ ಸಂಕಲನಕಾರ ಬಿ.ಎಸ್ ಕೆಂಪರಾಜು, ಕಲೆ-ವರದರಾಜ್ ಕಾಮತ್ ನಿರ್ವಹಿಸಿದರೆ ನವತಂತ್ರಜ್ಞರುಗಳಾದ ಲವಿತ್-ಛಾಯಾಗ್ರಹಣ, ವಾಸುಕಿ ವೈಭವ್-ಸಂಗೀತವನ್ನು ಸಂಯೋಜಿಸಿರುತ್ತಾರೆ. ಚಿತ್ರ ನಮ್ಮದೇ ಚಿತ್ರ ಮತ್ತು ಕನ್ನಡ ಕಲರ್ಸ್ ಸಂಸ್ಥೆಯಡಿಯಲ್ಲಿ ತಯಾರಾಗಿರುತ್ತದೆ. ಚಿತ್ರದಲ್ಲಿ ಮೂರು ಪೂರ್ಣ ಪ್ರಮಾಣದ ಹಾಡುಗಳಿದ್ದು ಎರೆಡು ಚಿಕ್ಕ ಹಾಡುಗಳಿವೆ.