ಬೆಂಗಳೂರು: ನಾಗಶೇಖರ್ ನಿರ್ದೇಶನದ, ದುನಿಯಾ ವಿಜಯ್ ನಾಯಕನಟನಾಗಿರುವ 'ಮಾಸ್ತಿ ಗುಡಿ' ಸಿನೆಮಾಗೆ ಅಮೂಲ್ಯ ನಾಯಕ ನಟಿಯರಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ. ನಿರ್ಮಾಪಕ ಸುಂದರ್ ಪಿ ಗೌಡ್ರು ಈ ಸುದ್ದಿಯನ್ನು ಧೃಢೀಕರಿಸಿದ್ದು "ಹೌದು ಅಮೂಲ್ಯ ಈ ಪಾತ್ರಕ್ಕೆ ತಕ್ಕ ನಟಿ. ಅವರು ನಾಯಕ ನಟಿಯರಲ್ಲಿ ಒಬ್ಬರಾಗಿ ತಂಡ ಸೇರಲಿದ್ದಾರೆ. ಇನ್ನೆರಡು ದಿನಗಳಲ್ಲಿ ಉಳಿದ ನಟಿಯರನ್ನು ಆಯ್ಕೆ ಮಾಡಲಿದ್ದೇವೆ" ಎನ್ನುತ್ತಾರೆ.
ಕೊನೆಯ ಬಾರಿಗೆ 'ಮದುವೆಯ ಮಮತೆಯ ಕರೆಯೋಲೆ'ಯಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ ಈಗ 'ಕೃಷ್ಣ ರುಕ್ಕು' ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಸಿನೆಮಾ ಮುಂದಿನ ವಾರ ಬಿಡುಗಡೆಯಾಗಲಿದೆ.
ಮೂಲಗಳ ಪ್ರಕಾರ 'ಮಾಸ್ತಿ ಗುಡಿ'ಗೆ ಕೃತಿ ಕರಬಂಧ ಮತ್ತು ಪ್ರಿಯಾಮಣಿ ಅವರನ್ನು ಕೂಡ ಕೇಳಲಾಗಿದೆಯಂತೆ. "ಇದು ಕಮರ್ಷಿಯಲ್ ಸಿನೆಮಾ. ತಮ್ಮ ಪಾತ್ರದ ಶೋಧನೆಗೆ ದುನಿಯಾ ವಿಜಯ್ ಕಷ್ಟ ಪಟ್ಟಿದ್ದಾರೆ. ಮೊದಲಿಗೆ ನಾಯಕ ನಟಿಯರಾಗಿ ಹೊಸಬರನ್ನು ಆಯ್ಕೆ ಮಾಡುವ ಇರಾದೆಯಿತ್ತು, ಆದರೆ ತರಬೇತಿಯ ಸಮಯ ಹೆಚ್ಚಾಗುವುದೆಂದು ಮತ್ತು ಫೆಬ್ರವರಿ ೨೫ರಿಂದ ಚಿತ್ರೀಕರಣ ಪ್ರಾರಂಭವಾಗಬೇಕಿರುವುದರಿಂದ ಜನಪ್ರಿಯ ನಟಿಯರ ಆಯ್ಕೆಯೇ ಸೂಕ್ತ ಎಂದೆನಿಸಿ ಮೊದಲಿಗೆ ಅಮೂಲ್ಯ ಅವರನ್ನು ಅಂತಿಮಗೊಳಿಸಲಾಗಿದೆ" ಎನ್ನುತ್ತವೆ ಮೂಲಗಳು.
ಹಿರೋ, ಹಿರೋಯಿನ್ ಅಲ್ಲದೆ ಹಿರಿಯ ನಟರಾದ ದೇವರಾಜ್, ಸುಹಾಸಿನಿ, ರಂಗಾಯಣ ರಘು, ಸಾಧು ಕೋಕಿಲಾ, ತಬಲಾ ನಾಣಿ, ಬುಲೆಟ್ ಪ್ರಕಾಶ್ ಮತ್ತು ಶರತ್ ಲೋಹಿತಾಶ್ವ ಕೂಡ ಸಿನೆಮಾದಲ್ಲಿ ನಟಿಸಲಿದ್ದಾರೆ.
Advertisement