ಬೆಂಗಳೂರು: ಅನಿಲ್ ಕುಮಾರ್ ನಿರ್ದೇಶನದ ಅಜಯ್ ರಾವ್ ಮತ್ತು ಅಮೂಲ್ಯ ನಟನೆಯ ಕೃಷ್ಣ ರುಕ್ಕು ಸಿನೆಮಾದ ಚಿತ್ರೀಕರಣದ ಸೆಟ್ ನಲ್ಲಿ ಹುಲಿಯೊಂದು ಸುಳಿದಾಡಿದರೂ ಚಿತ್ರೀಕರಣ ಮುಂದುವರಿಸಲಾಯಿತಂತೆ.
ಈ ಚಿತ್ರೀಕರಣದ ಗಳಿಗೆಯ ರೋಚಕತೆಯನ್ನು ಹಂಚಿಕೊಳ್ಳುವ ನಿರ್ಮಾಪಕ ಉದಯ್ ಮೆಹ್ತಾ, "ಈ ಸಿನೆಮಾದ ಕೆಲವು ಭಾಗಗಳನ್ನು ಕರ್ನಾಟಕದ ಅತಿ ಎತ್ತರದ ಶಿಖರವಾದ ಮುಳ್ಳಯನಗಿರಿ ಬೆಟ್ಟದ ತಪ್ಪಲಿನಲ್ಲಿರುವ ೩೦೦ ವರ್ಷ ಹಳೆಯ ಮನೆಯಲ್ಲಿ ನಡೆಸಲಾಗಿತ್ತು. ಈ ಭಾಗದಲ್ಲಿ ಹುಲಿಗಳಿರುವುದು ನಮ್ಮ ಚಿತ್ರತಂಡಕ್ಕೆ ತಿಳಿದಿತ್ತು. ಒಂದು ದಿನ ಅರಣ್ಯಾಧಿಕಾರಿಗಳಲ್ಲೊಬ್ಬರು ಬಂದು ಆ ಮನೆಯ ಸುತ್ತ ಹುಲಿಯಿರುವ ವಿಷಯ ತಿಳಿಸಿದರು"
"ಅದು ಚಿತ್ರೀಕರಣದ ಕೊನೆಯ ದಿನವಾಗಿತ್ತು. ಆ ಹಿಂದಿನ ರಾತ್ರಿ ಹುಲಿ ಮನೆಯ ಹತ್ತಿರವೇ ಸುಳಿದಾಡುತ್ತಿತ್ತು ಎಂದು ಆ ಮನೆಯ ಮಾಲೀಕ ತಿಳಿಸಿದರು. ಹೀಗಿದ್ದರೂ ನಾವು ಚಿತ್ರೀಕರಣವನ್ನು ನಿಲ್ಲಿಸದೆ, ಯಾರೂ ಒಬ್ಬಂಟಿಯಾಗಿ ಒಡಾಡದಂತೆ ತಿಳಿಸಿ, ಗುಂಪುಗಳಲ್ಲೇ ಎಲ್ಲ ಕೆಲಸವನ್ನು ಮಾಡಿಕೊಂಡು ಚಿತ್ರೀಕರಣ ಮುಗಿಸಿದೆವು" ಎಂದು ವಿವರಿಸುತ್ತಾರೆ ಮೆಹ್ತಾ.
ಈ ಪ್ರದೇಶ ಮುಥೋಡಿ ಅಭಯಾರಣ್ಯದಿಂದ ಕೇವಲ ೧೮ ಕಿಮೀ ದೂರದಲ್ಲಿದ್ದರಿಂದ ಹುಲಿ ಅಲ್ಲಿ ಓಡಾಡುವುದು ಸರ್ವೇ ಸಾಮಾನ್ಯ ಎಂದು ತಿಳಿದುಬಂತು ಎನ್ನುತಾರೆ ಮೆಹ್ತಾ.
ಹಾಗೆಯೇ ಚಲನಚಿತ್ರದ ಪ್ರಾರಂಭಿಕ ದೃಶ್ಯವನ್ನು ಜಲಪಾತದ ತುತ್ತತುದಿಯಲ್ಲಿ ಚಿತ್ರೀಕರಿಸಬೇಕಿದ್ದರಿಂದ, ಈ ತ್ರಾಸದ ಚಿತ್ರೀಕರಣಕ್ಕೆ ಹಲವಾರು ತಾಸುಗಳ ಸಮಯ ಹಿಡಿಯಿತಂತೆ.
ಈ ರೊಮ್ಯಾಂಟಿಕ್ ಚಿತ್ರದ ಹಿಂದಿನ ಸಾಹಸವನ್ನು ಜನ ಮೆಚ್ಚಲಿದ್ದಾರೆ ಎನ್ನುತ್ತಾರೆ ನಿರ್ಮಾಪಕ.
Advertisement