ಫಸ್ಟ್ ರ್ಯಾಂಕ್ ರಾಜು ಚಿತ್ರದ ಗುರು ನಂದನ್ 'ಮಿಸ್ಸಿಂಗ್ ಬಾಯ್'
ಬೆಂಗಳೂರು: ನಿರ್ದೇಶಕ ಡಿ.ಪಿ ರಘುರಾಮ್ ಹೊಸದೊಂದು ಚಿತ್ರ ನಿರ್ದೇಶನಕ್ಕಿಳಿದಿದ್ದು, ಚಿತ್ರಕ್ಕೆ ಇಂಟರೆಸ್ಟಿಂಗ್ ಟೈಟಲ್ ನೀಡಿದ್ದಾರೆ.
ಜುಲೈ 27 ರಿಂದ ಸಿನಿಮಾದ ಶೂಟಿಂಗ್ ಸೆಟ್ಟೇರಲಿದೆ. ಮಿಸ್ಸಿಂಗ್ ಬಾಯ್ ಎಂದು ಚಿತ್ರಕ್ಕೆ ಶೀರ್ಷಿಕೆ ಇಟ್ಟಿದ್ದು, ತಾಯಿ ಮತ್ತು ತಾಯ್ನಾಡಿಗೆ ಎಂಬ ಟ್ಯಾಗ್ ಲೈನ್ ಒಳಗೊಂಡಿದೆ.
ನೈಜ ಜೀವನದ ಕಥೆ ಆಧರಿಸಿ ಚಿತ್ರ ತಯಾರಾಗುತ್ತಿದೆ. 2000ದಲ್ಲಿ ಹುಬ್ಬಳ್ಳಿಯಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದ ಬಾಲಕನೊಬ್ಬನ ಕಥೆ ಇದಾಗಿದೆ. ಇನ್ಸ್ ಪೆಕ್ಟರ್ ಲವಕುಮಾರ್ ಈ ನೈಜ ಘಟನೆಯ ಸಂಪೂರ್ಣ ಚಿತ್ರಣ ನೀಡಿದ್ದು, ಅದರ ಆಧಾರಮ ಮೇಲೆ ರಘುರಾಂ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಇದೊಂದು ಸಾಮಾನ್ಯ ಕತೆಯನ್ನು ವಿಶೇಷವಾಗಿ ಹೇಳುವ ಪ್ರಯತ್ನ ಎನ್ನಲಾಗಿದೆ. ಸುಮ್ನೆ ಯಾವ್ದೋ ಸಿನಿಮಾ ಮಾಡೋ ಬದ್ಲು ಟೈಮ್ ತಗೊಂಡು ಒಳ್ಳೆ ಚಿತ್ರ ಮಾಡೋದು ರಘುರಾಮ್ ಸ್ಟೈಲ್. ಹಾಗಾಗಿ ಮಿಸ್ಸಿಂಗ್ ಬಾಯ್ ಒಂದು ಸ್ಪೆಷಲ್ ಸಿನಿಮಾ ಅನ್ನೋದು ಅವ್ರನ್ನು ಬಲ್ಲವರ ಮಾತು.
ಹುಬ್ಬಳ್ಳಿಯಿಂದ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದ ಬಾಲಕನೊಬ್ಬನನ್ನು ರಿಮ್ಯಾಂಡ್ ಹೋಂಗೆ ಕಳುಹಿಸಲಾಗುತ್ತದೆ. ಆದರೆ ಅಲ್ಲಿ ಆ ಬಾಲಕನನ್ನು ನೋಡಲು ಭೇಟಿಯಾಗಲು ಯಾರೊಬ್ಬರು ಬರುವುದಿಲ್ಲ, ನಂತರ ಆತನನ್ನು ಶಾರದಾ ಶಿಶು ವಿಹಾರಕ್ಕೆ ಕರೆದೊಯ್ಯಲಾಗುತ್ತದೆ. ದಂಪತಿಯೊಬ್ಬರು ಬಾಲಕನನ್ನು ದತ್ತು ತೆಗೆದುಕೊಳ್ಳುತ್ತಾರೆ, ಅವರ ಬಳಿಯೂ ಇರದ ಬಾಲಕ ತನ್ನ ಮೂಲವನ್ನು ಹುಡುಕಿಕೊಂಡು ಹೋಗುವ ಕಥೆ ಇದಾಗಿದೆ.
ರಂಘಾಯಣ ರಘು ಇನ್ಸ್ ಪೆಕ್ಟರ್ ಲವಕುಮಾರ್ ಪಾತ್ರ ನಿರ್ವಹಿಸಲಿದ್ದಾರೆ. ಫರ್ಸ್ಟ್ ರ್ಯಾಂಕ್ ರಾಜು ಖ್ಯಾತಿಯ ನಟ ಗುರು ನಂದನ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಾವಿಬ್ಬರು ಒಂದೇ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದೆವು, ನಂತರ ಇಬ್ಬರು ಗೆಳೆಯರಾಗಿದ್ದು, ಚಿತ್ರದಲ್ಲಿ ಅಭಿನಯಿಸಲು ಅವರು ಒಪ್ಪಿದ್ದಾರೆ ಎಂದು ರಘುರಾಮ್ ತಿಳಿಸಿದ್ದಾರೆ.ಕಿರಣ್ ರಾಥೋಡ್ ನಾಯಕಿಯ ಪಾತ್ರದಲ್ಲಿ ನಟಿಸಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ