ಬೆಂಗಳೂರು: ನಟಿ ಕೃತಿ ಕರಬಂಧ ಅವರಿಗೆ ಅಪಘಾತವೊಂದರಲ್ಲಿ ಪೆಟ್ಟಾಗಿರುವುದರಿಂದ ದುನಿಯಾ ವಿಜಯ್ ಅಭಿನಯದ 'ಮಾಸ್ತಿ ಗುಡಿ' ಸಿನೆಮಾದ ಚಿತ್ರೀಕರಣಕ್ಕೆ ಹಿನ್ನಡೆಯಾಗಿದೆ. ನಿರ್ದೇಶಕ ನಾಗಶೇಖರ್ ಹೇಳುವಂತೆ ಬೆಂಗಳೂರು ವಿಮಾನನಿಲ್ದಾಣದಿಂದ ಹಿಂದಿರುಗುವಾಗ ಸಣ್ಣ ಅಪಘಾತವೊಂದರಿಂದ ಕೃತಿ ಅವರಿಗೆ ಪೆಟ್ಟಾಗಿದೆ ಎಂದು ತಿಳಿಸಿಡುತ್ತಾರೆ.
"ನಾವು ಕೇರಳದಲ್ಲಿ 15 ದಿನಗಳ ಚಿತ್ರೀಕರಣ ನಡೆಸಬೇಕಿತ್ತು. ಅದು ಜುಲೈ 18 ರಿಂದ ಪಾರಂಭವಾಗಬೇಕಿತ್ತು. ದುರದೃಷ್ಟವಶಾತ್ ಭಾನುವಾರ ರಾತ್ರಿ ಅಪಘಾತದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿರುವುದಾಗಿ ಕೃತಿ ನನಗೆ ಸಂದೇಶ ಕಳುಹಿಸಿದರು. ಅವರು ಇನ್ನು 20 ದಿನಗಳ ಕಾಲ ವಿರಮಿಸಬೇಕಾಗಿದೆ. ಅವರು ಶೀಘ್ರ ಗುಣಮುಖರಾಗುತ್ತಾರೆ ಎಂದು ನಂಬಿದ್ದೇನೆ" ಎನ್ನುತ್ತಾರೆ ನಾಗಶೇಖರ್.
ಈ ದುರದೃಷ್ಟಕರ ಘಟನೆಯಿಂದ ಈ ಹಂತದ ಚಿತ್ರೀಕರಣ ಸೆಪ್ಟೆಂಬರ್ ಗೆ ಮುಂದೂಡಲಾಗಿದೆ. "ನಾನು ನನ್ನ ದಿನಾಂಕಗಳನ್ನು ಮುಂದಕ್ಕೆ ಹಾಕಿಕೊಳ್ಳಬಹುದು, ಆದರೆ ನಿರ್ಮಾಪಕ ಸುಂದರ್ ಪಿ ಗೌಡ್ರು ಬಗ್ಗೆ ಚಿಂತಿಸಿದಾಗ ಬೇಸರವಾಗುತ್ತದೆ. ಅವರಿಗೆ ತಿಂಗಳಿಗೆ 20 ಲಕ್ಷ ಬಡ್ಡಿ ಕಟ್ಟಬೇಕಾಗುತ್ತದೆ. ಅಲ್ಲದೆ ಎಲ್ಲಾ ಕಲಾವಿದರು ಮತ್ತು 200 ಜನರ ತಂಡ 15 ದಿನಗಳವರೆಗೆ ಕೇರಳಕ್ಕೆ ಬರಲು ಸಿದ್ಧವಾಗಿತ್ತು. ಆದುದರಿಂದಲೇ ಈ ಹಂತವನ್ನು ಒಂದೂವರೆ ತಿಂಗಳ ಮುಂಚೆಯೇ ಯೋಜಿಸಿದ್ದೆ" ಎನ್ನುತ್ತಾರೆ ನಾಗಶೇಖರ್.
"ಈಗ ನಟ ದುನಿಯಾ ವಿಜಯ್, ಅಮೂಲ್ಯ, ಬಿ ಜಯಶ್ರೀ, ದತ್ತಣ್ಣ, ಬುಲೆಟ್ ಪ್ರಕಾಶ್, ಶ್ರೀನಿವಾಸ ಮೂರ್ತಿ ಇವರೆಲ್ಲರ ದಿನಾಂಕಗಳನ್ನು ಮತ್ತೆ ಕೇಳಬೇಕು" ಎಂದು ತಿಳಿಸುತ್ತಾರಷ್ಟೇ ನಿರ್ದೇಶಕ.
ಕೃತಿ ಕರಬಂಧ ತಮ್ಮ ಚೊಚ್ಚಲ ಬಾಲಿವುಡ್ ಚಿತ್ರ ರಾಸ್-4 ರ ಪ್ರಚಾರ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಳ್ಳಬೇಕಿತ್ತು. ಆದರೆ ಈಗ ಅದು ಕೂಡ ದುರ್ಲಭ ಎನ್ನುವ ಸ್ಥಿತಿ ಒದಗಿದೆ.