ಬೆಂಗಳೂರು: 'ಜಗ್ಗುದಾದಾ' ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿರುವ ದಕ್ಷಿಣ ಭಾರತದ ನಟಿ ದೀಕ್ಷಾ ಸೇಥ್ ಅವರಿಗೆ ಇಲ್ಲಿನ ಭಾಷೆ ತೊಡಕು ಎನ್ನಿಸಲೇ ಇಲ್ಲವಂತೆ, ಬದಲಾಗಿ ಆತ್ಮವಿಶ್ವಾಸದಿಂದ ನಟಿಸರುವ ಅವರು ತಮ್ಮ ಚೊಚ್ಚಲ ಕನ್ನಡ ಚಿತ್ರದ ಆಯ್ಕೆಯ ಬಗ್ಗೆ ಆನಂದದಿಂದಿದ್ದಾರೆ.
"'ಜಗ್ಗುದಾದಾ'ಗೂ ಮೊದಲು ನನಗೆ ಕನ್ನಡದಿಂದ ಸಾಕಷ್ಟು ಅವಕಾಶಗಳು ಒದಗಿ ಬಂದಿದ್ದವು. ಆದರೆ ಅವುಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಸಿನೆಮಾದಲ್ಲಿ ನನಗೆ ನಟಿಸಲು ಕೇಳಿಕೊಡಾಗ ಒಪ್ಪಿಕೊಂಡೆ. ಏಕೆಂದರೆ ಇದಕ್ಕೆ ಮಾಸ್ ವಿಷಯ ಇತ್ತು. ಅಲ್ಲದೆ 'ಜಗ್ಗುದಾದ' ಕೌಟುಂಬಿಕ ಕಥೆ ಮತ್ತು ಕುಟುಂಬ ಪೂರ್ತಿ ಸಿನೆಮಾ ನೋಡಿ ಆನಂದಿಸುವುದು ನನಗೆ ಇಷ್ಟ" ಎನ್ನುತ್ತಾರೆ ನಟಿ.
ನಟ ದರ್ಶನ್ ಜೊತೆಗೆ ಹೊಂದಾಣಿಕೆ ಅತಿ ಸುಲಭ ಎನ್ನುವ ನಟಿ ನಿರ್ಮಾಪಕ ಮತ್ತು ಚೊಚ್ಚಲ ನಿರ್ದೇಶಕ ರಾಘವೇಂದ್ರ ಹೆಗಡೆ ಅವರ ಬಗ್ಗೆಯೂ ಅಂತಹುದೇ ಅಭಿಪ್ರಾಯ ಹೊಂದಿದ್ದಾರೆ. "ಈ ಹಿಂದೆ ಸಂಕಲನಕಾರನಾಗಿದ್ದ ರಾಘವೇಂದ್ರ ಸಿನೆಮಾದ ಎಲ್ಲ ಆಯಾಮಗಳನ್ನು ಚೆನ್ನಾಗಿ ಅರಿತಿದ್ದಾರೆ, ಯಾವ ದೃಶ್ಯಗಳು ಸಿನೆಮಾಗೆ ಅವಶ್ಯಕ ಎಂದು ಅವರಿಗೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ ಅವರು ಹೆಚ್ಚು ಸಮಯ ವ್ಯರ್ಥ ಮಾಡಲಿಲ್ಲ" ಎನ್ನುತ್ತಾರೆ ದೀಕ್ಷಾ.
"'ಜಗ್ಗುದಾದಾ' ಸೆಟ್ ನಲ್ಲಿ ನಾನು ಮೊದಲಿಗೆ ಹೊರಗಿನವಳಾಗಿದ್ದರೂ ನಂತರ ಎಲ್ಲರ ಸಹಕಾರದಿಂದ ನಾನೂ ಎಲ್ಲರಲ್ಲಿ ಒಬ್ಬಾಳಾಗಿದ್ದೆ" ಎನ್ನುತ್ತಾರೆ ನಟಿ.
'ಜಗ್ಗುದಾದ' ಜೊತೆಗೆ ಹಿಂದಿ ಸಿನೆಮಾವೊಂದರಲ್ಲಿ ನಟಿಸಿರುವ ನಟಿ ಅದರ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. "'ಸಾಥ್ ಕದಮ್' ಎಂಬ ಸಿನೆಮಾದಲ್ಲಿ ನಟಿಸಿದ್ದೇನೆ. ಇದಕ್ಕೆ ಮೋಹಿತ್ ಷಾ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಅಮಿತ್ ಸಧ್ ನಾಯಕ ನಟ" ಎಂದು ವಿವರಿಸುತ್ತಾರೆ ದೀಕ್ಷಾ.
Advertisement