ಮುಂಬೈ: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಸಹನಿರ್ಮಾಣದಲ್ಲಿ ಮೂಡಿಬಂದಿರುವ 'ಉಡ್ತಾ ಪಂಜಾಬ್' ಸಿನೆಮಾ ಈಗ ವಿವಾದದ ಕೇಂದ್ರಬಿಂದುವಾಗಿದೆ. ಯುವಕರಲ್ಲಿ ಹೆಚ್ಚುತ್ತಿರುವ ಡ್ರಗ್ ಸೇವನೆಯ ಬಗೆಗಿನ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಅಸಂಖ್ಯಾತ ಬದಲಾವಣೆಗಳನ್ನು ಸೂಚಿಸಿರುವ ಹಿನ್ನಲೆಯಲ್ಲಿ, ಸೆನ್ಸಾರ್ ಮಂಡಳಿ ಅಧ್ಯಕ್ಷ ಸರ್ವಾಧಿಕಾರಿಯ ಧೋರಣೆ ಉಳ್ಳವರಾಗಿದ್ದು, ಉತ್ತರ ಕೊರಿಯಾದಲ್ಲಿ ಬದುಕಿತ್ತಿದ್ದೇವೆ ಎಂಬ ಭಾವನೆ ಮೂಡಿಸುತ್ತಾರೆ ಎಂದು ಮಂಗಳವಾರ ಕಶ್ಯಪ್ ದೂರಿದ್ದಾರೆ.
"ಉತ್ತರ ಕೊರಿಯಾದಲ್ಲಿ ಬದುಕುವುದರ ಬಗ್ಗೆ ನನಗೆ ಸದಾ ಆಶ್ಚರ್ಯ. ಈಗ ಅದಕ್ಕಾಗಿ ವಿಮಾನ ಹಿಡಿಯುವ ಅವಶ್ಯಕತೆಯೂ ಇಲ್ಲ" ಎಂದು ಉತ್ತರ ಕೊರಿಯಾದ ಸರ್ವಾಧಿಕಾರದ ಆಡಳಿತದ ಬಗ್ಗೆ ಹೋಲಿಸಿ ಪ್ರತಿಕ್ರಿಯಿಸಿದ್ದಾರೆ.
ಅಭಿಷೇಕ್ ಚೌಬೆ ನಿರ್ದೇಶನದ ಈ ಚಿತ್ರದಲ್ಲಿ ಶಾಹಿದ್ ಕಪೂರ್, ಆಲಿಯಾ ಭಟ್, ಕರೀನಾ ಕಪೂರ್ ನಟಿಸಿದ್ದು, ಪಂಜಾಬ್ ನ ಯುವಕರಲ್ಲಿ ಹೆಚ್ಚುತ್ತಿರುವ ಡ್ರಗ್ ಸೇವನೆಯ ಕಥಾಹಂದರ ಹೊಂದಿದೆ.
ಪ್ರಮಾಣ ಪತ್ರ ಬೇಕಾದರೆ, ಸಿನೆಮಾ ಕಥೆ ಪಂಜಾಬ್ ನಲ್ಲಿ ನಡೆದಿಲ್ಲ ಎಂಬುವಂತೆ ಬದಲಾವಣೆಗಳನ್ನು ಮಾಡಲು ಸೂಚಿಸಿದ್ದ ಸೆನ್ಸಾರ್ ಪರಿಶೀಲನಾ ಸಮಿತಿಯ ಸಲಹೆಗಳು/ತಕರಾರುಗಳು ರಾಜಕೀಯ ಬಣ್ಣ ಪಡೆದಿವೆ ಎಂದು ಆರೋಪಿಸಲಾಗಿತ್ತು. ಪಂಜಾಬ್ ಗಿಂತಲೂ ಯಾವುದಾದರೂ ಕಾಲ್ಪನಿಕ ಪ್ರದೇಶದಲ್ಲಿ ಕಥೆ ನಡೆಯುವಂತೆ ಸೂಚಿಸಲು ಹಲವಾರು ಕಟ್ ಗಳನ್ನು-ಬದಲಾವಣೆಗಳನ್ನು ಸೆನ್ಸಾರ್ ಮಂಡಳಿ ಸೂಚಿಸಿತ್ತು.
ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಜ್ ನಿಹಲಾನಿ ಮೇಲೆ ಟೀಕಾ ಪ್ರಹಾರ ಮಾಡಿರುವ ಕಶ್ಯಪ್ "ನನ್ನ ಹೋರಾಟವನ್ನು ರಾಜಕೀಯ ಪಕ್ಷಗಳ ಜೊತೆಗೆ ಬೆಸೆಯಬೇಡಿ, ಏಕೆಂದರೆ ನನಗೆ ಯಾವುದೂ ಇಲ್ಲ.
"ಈ ನನ್ನ ಹೋರಾಟದಿಂದ ಹೊರಗುಳಿಯುವಂತೆ ಕಾಂಗ್ರೆಸ್, ಎಎಪಿ ಮತ್ತಿತರ ಪಕ್ಷಗಳಿಗೆ ನನ್ನ ಮನವಿ. ಇದು ನನ್ನ ಹಕ್ಕುಗಳು ವರ್ಸಸ್ ಸೆನ್ಸಾರ್ ಹೋರಾಟ. ನಾನು ನನಗಷ್ಟೇ ಮಾತಾಡುತ್ತಿದ್ದೇನೆ. ಇದು ನನ್ನ ಹೋರಾಟ ಇದಕ್ಕೆ ವಿರುದ್ಧವಾಗಿ ಸೆನ್ಸಾರ್ ಮಂಡಲಿಯಲ್ಲಿ ಕೂತಿರುವ ಸರ್ವಾಧಿಕಾರಿ ಉತ್ತರ ಕೊರಿಯಾವನ್ನು ಸೃಷ್ಟಿಸಿದ್ದಾರೆ" ಎಂದು ಅವರು ಬರೆದಿದ್ದಾರೆ.
"ಉಳಿದವರು ನಿಮ್ಮ ಹೋರಾಟ ಮಾಡಿ ನಾನು ನನ್ನ ಹೋರಾಟ ಮುಂದುವರೆಸುತ್ತೇನೆ" ಎಂದು ಕೂಡ 'ಗ್ಯಾಂಗ್ಸ್ ಆಫ್ ವಸೀಪುರ್' ಖ್ಯಾತಿಯ ಚಲನಚಿತ್ರ ನಿರ್ದೇಶಕ ಹೇಳಿದ್ದಾರೆ.
Advertisement