ಬೆಂಗಳೂರು: ರಾಜಕಾರಿಣಿಗಳ ಮಕ್ಕಳು ರಾಜಕಾರಣದ ಬದಲು ಸಿನೆಮಾ ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಈಗ ಆ ಸಂತತಿಗೆ ಎಚ್ ಎಂ ರೇವಣ್ಣನವರ ಪುತ್ರ ಅನೂಪ್ ನೂತನ ಸದಸ್ಯ. ತಮ್ಮ ಚೊಚ್ಚಲ ಚಿತ್ರ 'ಲಕ್ಷ್ಮಣ'ನ ಮೂಲಕ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ. ಚಿತ್ರ ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿದೆ.
"ನನಗೆ ಸಂತಸವಾಗುತ್ತಿದೆ. 'ಲಕ್ಷ್ಮಣ' ಕನ್ನಡ ಚಿತ್ರರಂಗದಲ್ಲಿ ನನ್ನ ಪ್ರಥಮ ಹೆಜ್ಜೆ. ನನ್ನ 15 ವರ್ಷದ ಕನಸು ನನಸಾಗುವ ಶುಕ್ರವಾರ ಸಮೀಪಿಸುತ್ತಿದೆ" ಎನ್ನುತ್ತಾರೆ ಅನೂಪ್.
ಮೊದಲ ಬಿಡುಗಡೆಯ ಭಯ ಕಾಡುತ್ತಿದೆಯೇ ಎಂಬ ಪ್ರಶ್ನೆಗೆ "ನಾನು ಒಂದು ವರ್ಷದಿಂದ ಕಷ್ಟ ಪಟ್ಟಿರುವುದನ್ನು ಜನ ತೆರೆಯ ಮೇಲೆ ಕಾಣಲಿದ್ದಾರೆ. ಜನ್ನ ನನ್ನನ್ನು ಒಪ್ಪುತ್ತಾರೋ ಇಲ್ಲವೋ ಎಂಬುದನ್ನು ತಿಳಿಯಲು ಕಾತರದಿಂದ ಕಾಯುತ್ತಿದ್ದೇನೆ. ಟೀಕೆಯನ್ನು ಸ್ವೀಕರಿಸಿ ಉತ್ತಮಪಡಿಸಿಕೊಳ್ಳಲು ಸಿದ್ಧನಿದ್ದೇನೆ" ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ ಅನೂಪ್.
"ನನ್ನ ಪ್ರಕಾರ ಯಾವುದೇ ಹಿನ್ನಲೆ ಏನಿದ್ದರೂ, ನಟನಾಗಿ ಉತ್ತಮವಾದದ್ದನ್ನು ನೀಡುವ ಒತ್ತಡ ಇದ್ದೇ ಇರುತ್ತದೆ. ಇದು ನನ್ನ ತೃಪ್ತಿ ಮತ್ತು ವೈಯಕ್ತಿಕ ಬೆಳವಣಿಗೆಗೆ ಅವಶ್ಯಕ. ಮತ್ತೊಬ್ಬರು ಸಿನೆಮಾ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ ಉತ್ತೇಜನ ನೀಡುವುದಕ್ಕೂ ಮೊದಲು ನನ್ನ ಸಿನೆಮಾ ಬಗ್ಗೆ ನನಗೆ ತೃಪ್ತಿ ಇರಬೇಕು" ಎನ್ನುತ್ತಾರೆ ಅನೂಪ್.
ರಾಜಕಾರಣಿಗಳ ಮಕ್ಕಳಾದ ನಿಖಿಲ್ ಕುಮಾರ್ (ಎಚ್ ಡಿ ಕುಮಾರಸ್ವಾಮಿ ಪುತ್ರ) ಮತ್ತು ಸಚಿನ್ (ಚೆಲುವರಾಯಸ್ವಾಮಿ ಪುತ್ರ) ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಧುಮಿಕಿದ್ದರು, ಅನೂಪ್ ಎಲ್ಲರಿಗಿಂತ ಮೊದಲು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. "ಹೌದು ನಾವೆಲ್ಲರೂ ಒಂದೇ ಬಾರಿಗೆ ಪ್ರಾರಂಭಿಸಿದೆವು. ಇದು ಕಾಕತಾಳೀಯ. ಸಿನೆಮಾ ಮಾಡುವ ನನ್ನ ಕನಸನ್ನು ಪೂರೈಸಲು ಇಲ್ಲಿಗೆ ಬಂದೆ. ಇತರರಿಗೆ ಆಸಕ್ತಿ ಮೂಡಿದ ಬಗೆ ಬಗ್ಗೆ ನನಗೆ ತಿಳಿದಿಲ್ಲ" ಎನ್ನುತ್ತಾರಷ್ಟೇ ನಟ.
ಸಿನಿಮಾಗಾಗಿ ಹೇಗೆ ಸಿದ್ಧರಾದಿರಿ ಎಂಬುದಕ್ಕೆ "ನಾನು ಹಲವಾರು ವೃತ್ತಿ ತರಬೇತಿ ನಟನಾ ಶಿಬಿರಗಳಲ್ಲಿ ಪಾಲ್ಗೊಂಡು ಕಲಿತೆ ಸಿನೆಮಾ ಸೆಟ್ ಗೆ ಬಂದದ್ದು. ಸಿನೆಮಾದ ವಿವಿಧ ಆಯಾಮಗಳ ಬಗ್ಗೆ ನನಗೆ ಸ್ಪಷ್ಟತೆ ಇತ್ತು. ಆದುದರಿಂದ ಚಿತ್ರೀಕರಣದ ವೇಳೆಯಲ್ಲಿ ನನಗೆ ಭಯವಾಗಲಿ-ತೊಡಕಾಗಲಿ ಆಗಲಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯಿತು" ಎನ್ನುತ್ತಾರೆ ಅನೂಪ್.
ನಿರ್ದೇಶಕ ಚಂದ್ರು ಬಗ್ಗೆ ಮಾತನಾಡುವ ಅನೂಪ್ "ನಾನು ಹೊಸ ನಟನಾಗಿ ಅವರ ಬಗ್ಗೆ ಹೆಚ್ಚು ಹೇಳಲಾರೆ. ಆದರೆ ನಾನು ಒಳ್ಳೆಯ ಸಿನೆಮಾದಿಂದ ಪ್ರಾರಂಭಿಸುವಂತೆ ಅವರು ಮಾಡಿದ್ದಾರೆ" ಎನ್ನುತ್ತಾರೆ.
ಅನೂಪ್ ಈಗಾಗಲೇ ಎಸ್ ನಾರಾಯಣ್ ನಿರ್ದೇಶನದಲ್ಲಿ ತಮ್ಮ ಎರಡನೇ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇದು ಥ್ರಿಲರ್ ಸಿನೆಮಾ ಆಗಿದ್ದು "ಒಂದು ವಾರದ ಚಿತ್ರೀಕರಣ ಸಂಪೂರ್ಣಗೊಳಿಸಿದ್ದೇನೆ. 'ಲಕ್ಷ್ಮಣ ಪ್ರಚಾರಕ್ಕಾಗಿ ಈಗ ತೊಡಗಿಸಿಕೊಂಡು ಬಿಡುಗಡೆಯ ನಂತರ ಮತ್ತೆ ಸೆಟ್ ಗೆ ಸೇರಲಿದ್ದೇನೆ" ಎಂದು ವಿವರಿಸುತ್ತಾರೆ.
Advertisement