ಮುಂಬೈ: ಸೆನ್ಸಾರ್ ಮಂಡಲಿಯ ಆಡಳಿತದಲ್ಲಿ ಭ್ರಷ್ಟಾಚಾರ ಈಗ ಸೊನ್ನೆ ಎಂದಿರುವ ಸೆನ್ಸಾರ್ ಕೇಂದ್ರ ಮಂಡಳಿ ಅಧ್ಯಕ್ಷ ಪಹ್ಲಜ್ ನಿಹಲಾನಿ, ಭ್ರಷ್ಟಾಚಾರದ ಪ್ರಕರಣಗಳೆಲ್ಲವೂ ಅವರು ಅಧಿಕಾರ ಸ್ವೀಕರಿಸುವುದಕ್ಕೂ ಹಿಂದಿನವು ಎಂದಿದ್ದಾರೆ.
"ವಿಳಂಬ ಮಾಡಿದ ಸಮಯದಲ್ಲಿ ಭ್ರಷ್ಟಾಚಾರ ನಡೆಯುತ್ತದೆ ಮತ್ತು ಇದು ಎಲ್ಲರಿಗೂ ತೊಂದರೆಯನ್ನುಂಟುಮಾಡುತ್ತದೆ. ನನ್ನ ತಿಳುವಳಿಕೆ ಮತ್ತು ನಾನು ಗಮನಿಸಿರುವ ಪ್ರಕಾರ ದೀಪಾವಳಿಯಲ್ಲಿ ಸಾಮಾನ್ಯವಾಗಿ ಬರುವ ಉಡುಗೊರೆಗಳನ್ನು ಕೂಡ ಅವರು ನಿರಾಕರಿಸಿದ್ದಾರೆ. ನನಗೆ ನಮ್ಮ ಸಹದ್ಯೋಗಿಗಳ ಮೇಲೆ ಹೆಮ್ಮೆಯಿದೆ. ಅವರು ಸವಾಲನ್ನು ಸ್ವೀಕರಿಸಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.
"ಅವರು ಮೊದಲು ಸೋಮವಾರದಿಂದ ಶುಕ್ರವಾರದವರೆಗೆ ಕೆಲಸ ಮಾಡುತ್ತಿದ್ದರು, ಆದರೆ ಈಗ ಶನಿವಾರ ಮತ್ತು ಭಾನುವಾರಗಳಂದು ಕೂಡ ಕೆಲಸ ಮಾಡುತ್ತಾರೆ.. ಅವರು ನನಗೆ ಬೆಂಬಲ ನೀಡುತ್ತಿದ್ದಾರೆ ಮತ್ತು ಪ್ರಮಾಣ ಪತ್ರ ನೀಡುವಲ್ಲಿ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಆದುದರಿಂದ ಇಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲ, ಭ್ರಷ್ಟಾಚಾರ ಸೊನ್ನೆ" ಎಂದು ನೆನ್ನೆ ವರದಿಗಾರರಿಗೆ ನಿಹಲಾನಿ ಹೇಳಿದ್ದಾರೆ.
ಈ ಹಿಂದಿನ ಸಿ ಬಿ ಎಫ್ ಸಿ ಮಂಡಲಿಯ ಸಿ ಇ ಒ ರಾಕೇಶ್ ಕುಮಾರ್ ಅವರನ್ನು ಲಂಚ ತೆಗೆದುಕೊಂಡಿರುವ ಆರೋಪದ ಮೇಲೆ ಸಿಬಿಐ ಬಂಧಿಸಿರುವುದರ ಬಗ್ಗೆ ಪ್ರಶ್ನಿಸಿದಾಗ ಆ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ನಾಯಕತ್ವದಲ್ಲಿ ಪ್ರಮಾಣಪತ್ರ ಒದಗಿಸಲು ಯಾವುದೇ ವಿಳಂಬವೆಸಗುತ್ತಿಲ್ಲ ಎಂದಿರುವ ಅವರು ಮಂಡಲಿಗೆ ೨೧ ದಿನದ ಸಮಯಾವಕಾಶವಿದ್ದರೂ ೨-೩ ದಿನಗಳಲ್ಲಿ ಪ್ರಮಾಣ ಪತ್ರ ನೀಡುತ್ತಿದ್ದೇವೆ. ಅಂತರ್ಜಾಲ ಪ್ರಮಾಣಪತ್ರ ನಿಡುವ ಯೋಜನೆಯನ್ನು ಜಾರಿ ಮಾಡಲಿದ್ದೇವೆ ಎಂದಿದ್ದಾರೆ ಪಹ್ಲಜ್ ನಿಹಲಾನಿ.
Advertisement