
ಬೆಂಗಳೂರು: ಉತ್ತಮ ಅವಕಾಶಗಳು ಬಂದಾಗ ಅವಗಳನ್ನು ಬಾಚಿಕೊಳ್ಳುವುದು ಅತಿ ಮುಖ್ಯ! 'ಜಾಗ್ವಾರ್' ಸಿನೆಮಾ ತಂಡ ನಟಿಯ ಹುಡುಕಾಟದಲ್ಲಿದ್ದಾಗ, ಅದನ್ನು ಸರಿಯಾಗಿ ಬಳಸಿಕೊಂಡ ನಟಿ ದೀಪ್ತಿ ಸಾಟಿ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ತವಕದಲ್ಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಿರ್ಮಿಸುತ್ತಿರುವ ಮತ್ತು ಅವರ ಪುತ್ರ ನಿಖಿಲ್ ಕುಮಾರ್ ನಾಯಕ ನಟನಾಗಿರುವ 'ಜಾಗ್ವಾರ್'ನಲ್ಲಿ ದೀಪ್ತಿ ನಾಯಕ ನಟಿ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕ ಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಸಿನೆಮಾದ ನಿರ್ದೇಶಕ ಎ ಮಹದೇವ್. ಎಸ್ ಎಸ್ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಸಿನೆಮಾಗೆ ಕಥೆ ಬರೆದಿದ್ದು, ಜಗಪತಿ ಬಾಬು, ಸಂಪತ್, ಬ್ರಹ್ಮಾನಂದ, ಸಾಧು ಕೋಕಿಲಾ ಪೋಷಕ ನಟರು.
ತಮ್ಮ ಪಾತ್ರದ ಬಗ್ಗೆ ಮಾತನಾಡಿದ ದೀಪ್ತಿ "'ನೀ-ನಾ' ದಲ್ಲಿ ಮೊದಲ ಬಾರಿಗೆ ನಟಿಸಿದ ಮೇಲೆ ಮುಂಬೈನಲ್ಲಿದ್ದ 'ಜಾಗ್ವಾರ್' ಚಿತ್ರತಂಡದ ಮುಂದೆ ಆಡಿಶನ್ ಗೆ ಹಾಜರಾದೆ. ನಾನು ಪಾತ್ರವನ್ನು ನಿರ್ವಹಿಸಿದ ರೀತಿ ಅವರಿಗೆ ಒಪ್ಪಿಗೆಯಾಗಿ ನನ್ನನ್ನು ಆಯ್ಕೆ ಮಾಡಿದರು. ಈಗ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದೇನೆ" ಎನ್ನುತ್ತಾರೆ.
ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧರಾಗುತ್ತಿರುವ ದೀಪ್ತಿ "ನಿರ್ದೇಶಕ ಮಹದೇವ್, ಸಿನೆಮ್ಯಾಟೋಗ್ರಾಫರ್ ಮನೋಜ್ ಪದ್ಮನಾಭನ್ ಒಳಗೊಂಡಂತೆ ಅತ್ಯುತ್ತಮ ತಂತ್ರಜ್ಞರ ಜೊತೆಗೆ ಕೆಲಸ ಮಾಡುವ ಅವಕಾಶ ಒದಗಿಸಿಕೊಟ್ಟಿದೆ 'ಜಾಗ್ವಾರ್'. ಕೆಲಸ ಪ್ರಾರಂಭಿಸಿದಾಗ ನನಗೇನೂ ತಿಳಿದಿರಲಿಲ್ಲ. ಆದರೆ ಈಗ ಸುಲಭವಾಗುತ್ತಿದೆ. ಅದಕ್ಕೆ ಚಿತ್ರತಂಡವೇ ಕಾರಣ. ದಕ್ಷಿಣ ಭಾರತದ ಭಾಷೆಗಳನ್ನು ತಿಳಿಯದ ನನ್ನ ಜೊತೆ ಬಹಳ ಶಾಂತಿಯಿಂದ ವರ್ತಿಸಿ ಕೆಲಸ ಕಲಿಸಿಕೊಡುತ್ತಿದ್ದಾರೆ. ಕನ್ನಡದಲ್ಲಿ ಚಿತ್ರೀಕರಣ ಮುಗಿಸಿ ತೆಲುಗಿನಲ್ಲಿ ಮತ್ತೆ ಅದನ್ನೇ ನಟಿಸುವುದು ಸವಾಲು" ಎಂದು ವಿವರಿಸುತ್ತಾರೆ.
ಭರತನಾಟ್ಯ ಮತ್ತು ಕಥಕ್ಕಳಿ ಕಲಿತಿರುವ ನಟಿಗೆ ಈ ಸಿನೆಮಾದಲ್ಲಿ ನೃತ್ಯಕ್ಕೂ ಅಪಾರ ಅವಕಾಶ ಇದೆಯಂತೆ.
Advertisement