ಬೆಂಗಳೂರು: ತಮ್ಮ ಆರು ವರ್ಷಗಳ ಅನುಭವದಲ್ಲಿ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ತಳವೂರಿರುವ ಸಮಂತ ರುತ್ ಪ್ರಭು, ಪವನ್ ಕುಮಾರ್ ನಿರ್ದೇಶನದ 'ಯು-ಟರ್ನ್' ನ ತಮಿಳು ಮತ್ತು ತೆಲುಗು ರಿಮೇಕ್ ಗಳಲ್ಲಿ ನಟಿಸಲು ಆಸಕ್ತಿ ತೋರಿದ್ದಾರಂತೆ.
ಮಾರ್ಚ್ ೧೮ ರಂದು ಬೆಂಗಳೂರಿನಲ್ಲಿದ್ದ ನಟಿ, 'ಯು-ಟರ್ನ್' ಸಿನೆಮಾ ನೋಡಿದ್ದಾರೆ. ಇವರ ಜೊತೆಗೆ ನಟ ನಾಗ ಚೈತನ್ಯ ಕೂಡ ಇದ್ದರಂತೆ. ಇದನ್ನು ಧೃಢೀಕರಿಸಿದ ಪವನ್ "ಟ್ರೇಲರ್ ನೋಡಿದ ಮೇಲೆ ಸಮಂತ ನನ್ನ ಜೊತೆಗೆ ಮಾತನಾಡಿದರು. ಅವರು ಸ್ಕ್ರಿಪ್ಟ್ ಓದಿದ ಮೇಲೆ ಈಗ ಸಿನೆಮಾದ ಪ್ರಿವ್ಯೂ ಕೂಡ ವೀಕ್ಷಿಸಿದ್ದಾರೆ. ಈಗ ಇದನ್ನು ರಿಮೇಕ್ ಮಾಡುವುದರ ಬಗ್ಗೆ ಚರ್ಚಿಸುತ್ತಿದ್ದೇವೆ" ಎನ್ನುತ್ತಾರೆ.
ನಾಗ ಚೈತನ್ಯ ತಮ್ಮ ಹಿಂದಿನ ಸಿನೆಮಾ 'ಲೂಸಿಯಾ'ದ ಅಭಿಮಾನಿಯಾಗಿರುವುದರಿಂದ ಅವರು ಸಮಂತಾ ಜೊತೆಗೆ ಬಂದು ಸಿನೆಮಾ ವೀಕ್ಷಿಸಿದರು ಎಂದು ತಿಳಿಸುತ್ತಾರೆ ಪವನ್.
ನಿರ್ದೇಶಕ ಈಗ 'ಯು-ಟರ್ನ್' ನಿರ್ಮಾಪಕರ ಜೊತೆ ತೆಲುಗು ಮತ್ತು ತಮಿಳು ರಿಮೇಕ್ ಸಾಧ್ಯತೆಗಳನ್ನು ಚರ್ಚಿಸುತ್ತಿದ್ದಾರಂತೆ. "ಸಮಂತ ನಮ್ಮ ಕನ್ನಡ ಸಿನೆಮಾವನ್ನು ತಮಿಳು ಮತ್ತು ತೆಲುಗಿನಲ್ಲಿ ಮಾಡಲು ಆಸಕ್ತಿ ತೋರಿರುವುದು ಒಳ್ಳೆಯ ಸುದ್ದಿ. ಆದರೆ, ನಮಗೆ ನಿರ್ಮಾಪಕರು ಸಿಗಬೇಕು. ಎಲ್ಲವೂ ಅಂತಿಮವಾದ ಮೇಲಷ್ಟೇ ನಾನು ಅಧಿಕೃತವಾಗಿ ಘೋಷಣೆ ಮಾಡಲು ಸಾಧ್ಯ" ಎಂದಿದ್ದಾರೆ ಪವನ್.
ಶ್ರದ್ಧಾ ಶ್ರೀನಾಥ್, ದಿಲೀಪ್ ರಾಜ್ ಸಿನೆಮಾದಲ್ಲಿ ನಟಿಸಿದ್ದಾರೆ.
Advertisement