ಬೆಂಗಳೂರು: ನಿರ್ದೇಶಕ ಹೇಮಂತ್ ಎಂ ರಾವ್ ಅವರ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾಗೆ ಸೆನ್ಸಾರ್ ಮಂಡಲಿ 'ಯು/ಎ' ಪ್ರಮಾಣ ಪತ್ರ ನೀಡಿ ಬಿಡುಗಡೆಗೆ ಹಾದಿ ಸುಗಮಗೊಳಿಸಿದೆ. ಇದು ಕೇವಲ ಕಾಣೆಯಾದವರ ಬಗೆಗಿನ ಸಿನೆಮಾ ಎಂದು ತಿಳಿದುಕೊಂಡಿದ್ದವರಿಗೆ ಈ ಪ್ರಮಾಣಪತ್ರ ತುಸು ಗೊಂದಲ ಮೂಡಿಸಿದ್ದು ನಿಜ.
ಇದರ ಬಗ್ಗೆ ವಿವರಿಸುವ ನಿರ್ದೇಶಕ ಹೇಮಂತ್ "ಈ ಸಿನೆಮಾದಲ್ಲಿ ಐದು ಕೊಲೆಗಳಾಗುತ್ತವೆ. ಇದು ಕಾಣೆಯಾದವರ ಬಗೆಗಿನ ಕಥೆಯಾದರೂ, ಪಯಣ ಅಷ್ಟು ಸುಲಭವಾದದ್ದಲ್ಲ ಏಕೆಂದರೆ ಇದಕ್ಕೆ ಕ್ರೈಂ ಕೋನವು ಇದೆ" ಎನ್ನುತ್ತಾರೆ.
ಇದೇ ತಿಂಗಳು ೨೭ರಂದು ಬಿಡುಗಡೆಯಾಗಲಿರುವ ಈ ಸಿನೆಮಾಗೆ ಮೊದಲ ಪ್ರೇಕ್ಷಕರಾಗಿದ್ದ ಸೆನ್ಸಾರ್ ಮಂಡಲಿಯ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿರುವುದಕ್ಕೆ ಸಂತಸ ವ್ಯಕ್ತಪಡಿಸುವ ಹೇಮಂತ್ "ಅವರಿಗೆ ಸಿನೆಮಾ ಇಷ್ಟವಾಯಿತು. ಅನಂತನಾಗ್ ಅವರ ನಟನೆಗಂತೂ ಮಾರುಹೋದರು" ಎನ್ನುತ್ತಾರೆ.
ಪುಷ್ಕರ್ ಫಿಲ್ಮ್ಸ್ ಬ್ಯಾನರ್ ಅಡಿ ನಿರ್ಮಿಸಲಾಗಿರುವ ಈ ಸಿನೆಮಾದಲ್ಲಿ ಅನಂತ ನಾಗ್ ಅಲ್ಲದೆ, ರಕ್ಷಿತ್ ಶೆಟ್ಟಿ, ಶೃತಿ ಹರಿಹರನ್ ಮತ್ತು ಅಚ್ಯುತ್ ಕುಮಾರ್ ಕೂಡ ನಟಿಸಿದ್ದಾರೆ.
Advertisement