ಬೆಂಗಳೂರು: ನಟ ರಮೇಶ್ ಅರವಿಂದ್ ಅವರ ೧೦೦ ನೆ ಕನ್ನಡ ಚಿತ್ರ 'ಪುಷ್ಪಕ ವಿಮಾನ'ದ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. "ನಾನು ಈ ಸಿನೆಮಾವನ್ನು ಸಂಪೂರ್ಣವಾಗಿ ಆಹ್ವಾದಿಸಿದ್ದೇನೆ ಏಕೆಂದರೆ ತಿಳಿಹೃದಯದ ವ್ಯಕ್ತಿಯ ಪಾತ್ರ ನಿರ್ವಹಿಸಿದ್ದೇನೆ" ಎನ್ನುತ್ತಾರೆ ನಟ.
"ನನ್ನ ಪಾತ್ರಕ್ಕೆ ಸಂಬಂಧಿಸಿದಂತೆ ಅಷ್ಟೇ ತೀವ್ರತೆಯಿಂದ ನಟಿಸಿರುವವಳು ಚೋಟು (ಬಾಲನಟಿ ಯುವಿನಾ ಪಾರ್ಥವಿ)" ಎನ್ನುತ್ತಾರೆ ರಮೇಶ್.
ಸಿನೆಮಾದ ಬಹುತೇಕ ದೃಶ್ಯಗಳು ಅಪ್ಪ ಮತ್ತು ಮಗಳ ನಡುವೆ ನಡೆಯುತ್ತವಂತೆ. "ಇವೆರಡೂ ಪಾತ್ರಗಳ ನಡುವಿನ ಸಂಬಂಧ, ಕಥೆ ಮತ್ತು ಹಾಡುಗಳು ಪ್ರೇಕ್ಷನಿಗೆ ಕಣ್ಣೀರು ತರಿಸಲಿದೆ. ಹೆಣ್ಣು ಮಗು ಇರುವವರಿಗೆ ಅಥವಾ ಹೆಣ್ಣುಮಗುವಾಗಿ ಹುಟ್ಟಿರುವವರಿಗೆ ಈ ಸಿನೆಮಾ ಕಾಡುತ್ತದೆ" ಎಂದು ಕೂಡ ತಿಳಿಸುತ್ತಾರೆ ರಮೇಶ್.
ಸಿನೆಮಾದಲ್ಲಿ ಕೆಲಸ ಮಾಡಿದ ಯುವ ನಟರು ಮತ್ತು ತಂತ್ರಜ್ಞರನ್ನು ಮನಸಾರೆ ಪ್ರಶಂಸಿಸುವ ರಮೇಶ್ "ಸಹ ನಿರ್ಮಾಪಕ ವಿಖ್ಯಾತ್ ಮತ್ತು ನಿರ್ದೇಶಕ ಎಸ್ ರವೀಂದ್ರನಾಥ್ ಮುನ್ನಡೆಸಿದ 'ಪುಷ್ಪಕ ವಿಮಾನ' ಸಿನೆಮಾದ ತಂಡ ಬಹಳ ಉತ್ಸಾಹಿ ಗುಂಪು. ನನ್ನ ೧೦೦ನೇ ಸಿನೆಮಾ ಅವರ ಮೊದಲ ಪ್ರಯತ್ನ. ಈ ಹೊಂದಾಣಿಕೆ ಬಹಳ ಆಪ್ತವಾಗಿ ಕೆಲಸ ಮಾಡಿದೆ. ಸಿನೆಮಾದ ಪ್ರತಿ ಫ್ರೇಮಿಗೂ ಹೊಸತೊಂದನ್ನು ಸೇರಿಸಿದೆ ತಂಡ" ಎನ್ನುತ್ತಾರೆ.
ರಚಿತಾ ರಾಮ್ ಮತ್ತು ಜೂಹಿ ಚಾವ್ಲಾ ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೇಕ್ ಮೇಲೆ ಚೆರ್ರಿ ಹಣ್ಣಿದ್ದಂತೆ ಎನ್ನುವ ರಮೇಶ್ "ಇಡೀ ಸಿನೆಮಾ ಹೇಗೆ ಮೂಡಿ ಬಂದಿದೆ ಎಂಬುದನ್ನು ತಿಳಿಯಲು ಕಾತರದಿಂದಿದ್ದೇನೆ" ಎನ್ನುತ್ತಾರೆ.
ಈ ಸಿನೆಮಾದ ಡಬ್ಬಿಂಗ್ ನಂತರ ತಾವು ನಿರ್ದೇಶಿಸಲಿರುವ 'ಗಂಡು ಎಂದರೆ ಗಂಡು' ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ ರಮೇಶ್.
Advertisement