ಮುಂಗಾರು ಮಳೆ-೨ ಚಿತ್ರೀಕರಣ ಅಂತ್ಯ; ಗಣೇಶ್-ರವಿಚಂದ್ರನ್ ಜೋಡಿ ಮೋಡಿ!
ಬೆಂಗಳೂರು: ಕನ್ನಡದ ಬ್ಲಾಕ್ ಬಸ್ಟರ್ ಸಿನೆಮಾ ಮುಂಗಾರು ಮಳೆಯ ಮುಂದಿನ ಭಾಗವಾಗಿ ಮೂಡಿ ಬರುತ್ತಿರುವ ಶಶಾಂಕ್ ನಿರ್ದೇಶನದ ಮುಂಗಾರು ಮಳೆ-೨ ಹಲವಾರು ಕಾರಣಗಳಿಗೆ ಕುತೂಹಲ ಉಳಿಸಿಕೊಂಡಿದೆ. ಅದರಲ್ಲಿ ಗಣೇಶ್ ಮತ್ತು ರವಿಚಂದ್ರನ್ ಜೋಡಿ ಮಗ-ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಒಂದು. ರವಿಚಂದ್ರನ್ ಹುಟ್ಟುಹಬ್ಬದ ದಿನವಾದ ಇಂದು ಈ ಸಿನೆಮಾದ ಸ್ಟಿಲ್ ಕೂಡ ಲಭ್ಯವಾಗಿದೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಹಾಡಿನಲ್ಲಿ ಗಣೇಶ್ ಮತ್ತು ರವಿಚಂದ್ರನ್ ನಡುವಿನ ಭಾವನಾತ್ಮಕ ದೃಶ್ಯಗಳು ಆಪ್ತವಾಗಿ ಮೂಡಿ ಬಂದಿವೆ ಎನ್ನುತ್ತವೆ ಮೂಲಗಳು. ಇದಕ್ಕೆ ಚಂದನ್ ಶೆಟ್ಟಿ ರ್ಯಾಪ್ ಪ್ರಾಕಾರದಲ್ಲಿ ಗೀತರಚನೆ ಮಾಡಿದ್ದು, 'ಏನೇ ಮಾಡು ಬಯ್ಯೋದಿಲ್ಲ ನನ್ನ ಡ್ಯಾಡಿ/ ಚಿಕ್ಕೋನಿದ್ದಾಗ ತಿದ್ದುಸ್ತ್ರಿದು ಎ ಬಿ ಸಿ ಡಿ' ಎಂದಿವೆ ಆ ಹಾಡಿನ ಮೊದಲ ಸಾಲುಗಳು ಎಂದು ತಿಳಿದುಬಂದಿದೆ.
ಸಿನೆಮಾದ ಚಿತ್ರೀಕರಣವನ್ನು ಸಂಪೂರ್ಣಗೊಳಿಸಿರುವ ಶಶಾಂಕ್ ಮುಂದಿನ ವಾರದಿಂದ ಪ್ರಚಾರ ಕಾರ್ಯ ಆರಂಭಿಸಲಿದ್ದಾರಂತೆ. ಈ ತಿಂಗಳ ಅಂತ್ಯಕ್ಕೆ ಆಡಿಯೋ ಬಿಡುಗಡೆ ಮಾಡಲಿದ್ದು, ಜುಲೈ ನಲ್ಲಿ ಸಿನೆಮಾ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಇಕೆ ಪಿಕ್ಚರ್ಸ್ ನಿರ್ಮಿಸಿರುವ ಮುಂಗಾರು ಮಳೆ-೨ ರಲ್ಲಿ ನೇಹಾ ಶೆಟ್ಟಿ ಪಾದಾರ್ಪಣೆ ಮಾಡಲಿದ್ದಾರೆ. ಐಂದ್ರಿತಾ ರೇ ಕೂಡ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು,. ರವಿಶಂಕರ್ ಮತ್ತು ಸಾಧುಕೋಕಿಲಾ ಕೂಡ ತಾರಾಗಣದ ಭಾಗವಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ