ಬೆಂಗಳೂರು: ಪವನ್ ಕುಮಾರ್ ನಿರ್ದೇಶನದ 'ಯು ಟರ್ನ್'ನಲ್ಲಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡ ನಟಿ ಶ್ರದ್ಧಾ ಶ್ರೀನಾಥ್ ಅತಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.
ಅವರು ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಮುಂದಿನ ಚಿತ್ರ 'ಕಾಟ್ರೆ ವೇಳಿಯಿಡೈ' ನಲ್ಲಿ ಕೂಡ ನಟಿಸುತ್ತಿರುವುದು ವಿಶೇಷ. ಇದರ ಜೊತೆಜೊತೆಗೆ ಕಣ್ಣನ್ ನಿರ್ದೇಶನ ತಮಿಳು ಚಿತ್ರದಲ್ಲಿ ಗೌತಮ್ ಕಾರ್ತಿಕ್ ಎದುರು ನಟಿಸಲು ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಇನ್ನು ಹೆಸರಿಡದ ಈ ಚಿತ್ರದ ಚಿತ್ರೀಕರಣದ ಬಗ್ಗೆ ಹೇಳುವ ನಟಿ "ನಾವು ನಾಲ್ಕು ದಿನಗಳ ಚಿತ್ರೀಕರಣ ಮುಗಿಸಿದೆವು. ನಾನು ದೀಪಾವಳಿ ಹಬ್ಬದ ನಗರಕ್ಕೆ ಬಂದಿದ್ದೆ ಈಗ ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಮತ್ತೆ ಚೆನ್ನೈಗೆ ತೆರಳುತ್ತಿದ್ದೇನೆ" ಎನ್ನುತ್ತಾರೆ ಶ್ರದ್ಧಾ.
ಕನ್ನಡ ಸಿನೆಮಾ 'ಉಳಿದವರು ಕಂಡಂತೆ' ತಮಿಳು ರಿಮೇಕ್ ನಲ್ಲಿ ಪಾದಾರ್ಪಣೆ ಮಾಡಿದ ನಟಿಗೆ ಇದು ಮೂರನೇ ತಮಿಳು ಸಿನೆಮಾ.
ಇನ್ನು ಕನ್ನಡ ಚಿತ್ರರಂಗದಲ್ಲಿ, ನವೆಂಬರ್ 6 ರಿಂದ 'ಗೆಳೆಯ ಗೆಳತಿ' ಸಿನೆಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ. "ಈ ಸಿನೆಮಾದ ಚಿತ್ರೀಕರಣ 21 ದಿನಗಳವರೆಗೆ ಜರುಗಲಿದೆ" ಎನ್ನುತ್ತಾರೆ ನಟಿ.
ಈಮಧ್ಯೆ ಶ್ರದ್ಧಾ ಸುನಿ ನಿರ್ದೇಶನದ 'ಆಪರೇಷನ್ ಅಲಮೇಲಮ್ಮ್' ಮತ್ತು ಪ್ರದೀಪ್ ವರ್ಮಾ ನಿರ್ದೇಶನದ 'ಊರ್ವಿ' ಸಿನೆಮಾಗಳ ಬಿಡುಗಡೆಗೆ ಕಾಯುತ್ತಿದ್ದಾರೆ. "ಇವೆರಡು ಸಿನೆಮಾಗಳು ಉತ್ತಮವಾಗಿ ಮೂಡಿ ಬಂದಿವೆ ಮತ್ತು ನನ್ನನ್ನು ತೆರೆಯ ಮೇಲೆ ಕಾಣಲು ಉತ್ಸುಕಳಾಗಿದ್ದೇನೆ" ಎನ್ನುತ್ತಾರೆ.